ಮೀರತ್ (ಪಿಟಿಐ): ರನ್ವೇ ಬದಿ ನಿಂತು ಛಾಯಾಚಿತ್ರ ತೆಗೆಯಲು ಹೋದ ಉದ್ಯಮಿಯೊಬ್ಬರಿಗೆ ಪುಟ್ಟ ಹಗುರ ವಿಮಾನದ ರೆಕ್ಕೆ ಬಡಿದು ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿನ ಪಾರ್ತಪುರ ವಾಯುನೆಲೆಯಲ್ಲಿ ಶನಿವಾರ ನಡೆದಿದೆ.
ನವದೆಹಲಿಯಲ್ಲಿ ಕನ್ಸಲ್ಟೆನ್ಸಿ ಕಂಪೆನಿ ಹೊಂದಿರುವ ಯೋಗೇಶ್ ಗಾರ್ಗ್ ಮೃತರು. ಪೈಲಟ್ ಅನಿಲ್ ಗುಪ್ತಾ, ಅವರ ಸಹವರ್ತಿ ಪೂರ್ವಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಮಾನದ ಒಂದು ಗಾಲಿಗೆ ಹಾನಿಯಾಗಿದೆ.
ಬೆಳಿಗ್ಗೆ 10 ಗಂಟೆಗೆ ವಾಯುನೆಲೆಗೆ ಬಂದ ಯೋಗೇಶ್, ವಿಮಾನ ರನ್ವೇಯಿಂದ ಮೇಲಕ್ಕೇರುವ ಸಂದರ್ಭದ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಯತ್ನಿಸುತ್ತಿದ್ದರು. ಆ ಸಂದರ್ಭದಲ್ಲಿ ಅದರ ರೆಕ್ಕೆ ಅವರಿಗೆ ಬಡಿಯಿತು ಎಂದು ವಿಮಾನ ಹಾರಾಟ ತರಬೇತಿ ನೀಡುವ `ಪಂಖ್ ಏವಿಯೇಷನ್~ ಸಂಸ್ಥೆ ವಕ್ತಾರ ಅನಿಲ್ ಥಾಪಾ ತಿಳಿಸಿದ್ದಾರೆ.
`ಸಂಸ್ಥೆ ವಾಯುನೆಲೆ ಬಳಸಲು ಅನುಮತಿ ಪಡೆದಿಲ್ಲದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ರನ್ವೇಗೆ ಬಂದು ಛಾಯಾಚಿತ್ರ ತೆಗೆಯಲು ಯೋಗೇಶ್ ಅವರಿಗೆ ಯಾರು ಅನುಮತಿ ನೀಡಿದ್ದರು ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆದಿದೆ~ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.