ಕೆಂಭಾವಿ: ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ಅನೇಕ ಮಹನೀಯರು ಇಂದಿಗೂ ನಮಗೆ ನಿತ್ಯ ಸ್ಮರಣೀಯರು. ದೇಶ ಸ್ವತಂತ್ರ ಪಡೆದರೂ ಹೈದರಾಬಾದ್ -ಕರ್ನಾಟಕ ಭಾಗದ ಗುಲ್ಬರ್ಗ, ರಾಯಚೂರು, ಬೀದರ್, ಬಳ್ಳಾರಿ, ಈಗಿನ ಹೊಸ ಜಿಲ್ಲೆಗಳಾದ ಯಾದಗಿರಿ, ಕೊಪ್ಪಳ ಜಿಲ್ಲೆಗಳು ನಿಜಾಮರ ಕೈವಶದಲ್ಲಿದ್ದವು. ಅವರ ಕಪಿಮುಷ್ಟಿಯಿಂದ ಪಾರಾಗಲು ಇಲ್ಲಿನ ಅನೇಕ ಜನರು ಹೋರಾಟ ಮಾಡಿ ಅವರ ಆಳ್ವಿಕೆಯಿಂದ ಈ ಭಾಗವನ್ನು ಮುಕ್ತಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ನಿಜಾಮರ ವಿರುದ್ಧ ಹೋರಾಟ ಮಾಡಿದ ಅಪ್ಪಾರವ ವಕೀಲ ಅವರ ನೇತೃತ್ವದಲ್ಲಿ ಸರ್ದಾರ್ ಶರಣಗೌಡ ದುಮ್ಮದ್ರಿ, ಜಗನ್ನಾಥರಾವ ಚಂಡ್ರಕಿ, ಕೆಂಭಾವಿಯ ಸಹೋದರರಾದ ವಾಮನಾಚಾರ್ಯ ಪುರೋಹಿತ, ಭೀಮಾಚಾರ್ಯ ಪುರೋಹಿತ, ನಗನೂರ ಗ್ರಾಮದ ಮಲ್ಹಾರಾವ ಕುಲಕರ್ಣಿ, ಸಗರ ಗ್ರಾಮದ ಗಣಪತರಾವ ಕುಲಕರ್ಣಿ, ವಿಠ್ಠಲರಾವ ಕುಲಕರ್ಣಿ, ಮಲ್ಲಪ್ಪ ಚೌಡಗುಂಡ, ಮಲ್ಲಪ್ಪ ನಂದಿಕೋಲ, ರಾಜನಕೊಳೂರ ಗ್ರಾಮದ ಯಂಕನಗೌಡ ಪೊಲೀಸ್ ಪಾಟೀಲ ಸೇರಿದಂತೆ ಜಿಲ್ಲೆಯ ಇನ್ನೂ ಹಲವಾರು ಹೋರಾಟಗಾರರು ತಮ್ಮ ಜೀವದ ಹಂಗು ತೊರೆದು ನಿಜಾಮರ ವಿರುದ್ಧ ಹೋರಾಡಿದರು. ಅದರ ಫಲವಾಗಿ 1948 ಸೆಪ್ಟೆಂಬರ್ 17 ರಂದು ಹೈದರಾಬಾದ್ ಕರ್ನಾಟಕ ಭಾಗವು ಸ್ವತಂತ್ರವಾಯಿತು.
ಹಿರಿಯ ಹೋರಾಟಗಾರ ದಿ. ಭೀಮಾಚಾರ್ಯ ಪುರೊಹಿತ, ಈ ಭಾಗದ ಹಿರಿಯ ಸ್ವತಂತ್ರ ಹೋರಾಟಗಾರರಲ್ಲಿ ಒಬ್ಬರಾಗಿದ್ದರು.
ಕರ್ನಾಟಕ ಪೊಲೀಸ್ ಕೊಡಮಾಡುವ ಅತ್ಯುತ್ತಮ ಸೇವಾ ಪ್ರಶಸ್ತಿ, ಸ್ವತಂತ್ರ ಹೋರಾಟಗಾರ ಪ್ರಶಸ್ತಿ, ಜಿಲ್ಲಾಡಳಿತದ ವತಿಯಿಂದ ಹೋರಾಟಗಾರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿವೆ.
ಆ ಕಷ್ಟದ ದಿನಗಳನ್ನು ನೆನಪಿಸಿದರೆ ಇಂದಿಗೂ ಕಣ್ಣುಗಳು ಒದ್ದೆಯಾಗುತ್ತವೆ. ನಿಜಾಮರು ಕೊಟ್ಟ ಕಷ್ಟ ಅಷ್ಟಿಷ್ಟಲ್ಲ. ಮನೆಗಳನ್ನು ದೋಚುವುದು, ಕಂಡಕಂಡವರನ್ನು ಕೊಲ್ಲುವುದು, ಆಸ್ತಿ-ಪಾಸ್ತಿಗಳನ್ನು ಹಾಳು ಮಾಡುವುದು ಮಾಡುತ್ತಿದ್ದರು. ಅವರ ಅಟ್ಟಹಾಸವನ್ನು ಮೆರೆದು ನಾವು ದಿಟ್ಟತನದಿಂದ ಹೋರಾಡಿದೆವು. ಇದರಲ್ಲಿ ಅನೇಕರ ಪಾತ್ರವೂ ಇದೆ. ಎಂದು ನೆನಪು ಬಿಚ್ಚಿಡುತ್ತಾರೆ ಹಿರಿಯ ಸ್ವಾತಂತ್ರ ಯೋಧ ಯಂಕನಗೌಡ ಪೊಲೀಸ್ ಪಾಟೀಲ ರಾಜನಕೋಳೂರ.
ನಿಜಾಮರ ವಿರುದ್ಧ ಹೋರಾಟ ಮಾಡಿ ನಮಗೆ ಸ್ವತಂತ್ರ ತಂದುಕೊಟ್ಟ ಈ ಭಾಗದ ಅನೇಕ ಮಹನೀಯರನ್ನು ಗುರುತಿಸುವಲ್ಲಿ ಸರ್ಕಾರ ವಿಫಲವಾಗಿದೆ. ಸರ್ಕಾರದಿಂದ ಸಿಗುವ ಕನಿಷ್ಠ ಸೌಲಭ್ಯಗಳೂ ಅವರಿಗೆ ದೊರಕುತ್ತಿಲ್ಲ. ನಿಜಾಮರ ಆಳ್ವಿಕೆಯಿಂದ ಬೇಸತ್ತಿದ್ದ ಆಗಿನ ಜನತೆಗೆ ಹೋರಾಟಗಾರರು ತಮ್ಮ ಪ್ರಾಣದ ಹಂಗು ತೊರೆದು ಹೋರಾಟ ಮಾಡಿ, ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಸರ್ಕಾರ ಈಗಲಾದರೂ ಅವರ ಕುಟುಂಬಕ್ಕೆ ನೆರವು ಒದಗಿಸಬೇಕು ಎಂದು ಶ್ರೀನಿವಾಸ ಕುಲಕರ್ಣಿ ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.