ನವದೆಹಲಿ (ಐಎಎನ್ಎಸ್): ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ ಈ ವಾರ ವಿಯೆಟ್ನಾಂಗೆ ಭೇಟಿ ನೀಡಲಿದ್ದಾರೆ. ಆರ್ಥಿಕ ಅಂಶಗಳೂ ಸೇರಿದಂತೆ ಹಲವು ವಿಷಯಗಳ ಕುರಿತು ಆ ದೇಶದೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಚೀನಾವು ತನ್ನ ದೇಶದ ದಕ್ಷಿಣ ಭಾಗದ ಸಮುದ್ರ ವಲಯದಲ್ಲಿ ತೀವ್ರ ಹಿಡಿತ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣ ಅವರ ವಿಯೆಟ್ನಾಂ ಭೇಟಿ ಮಹತ್ವ ಪಡೆದುಕೊಂಡಿದೆ.
ಶುಕ್ರವಾರ ಹನಾಯ್ನಲ್ಲಿ ಕೃಷ್ಣ ಹಾಗೂ ವಿಯೆಟ್ನಾಂ ವಿದೇಶಾಂಗ ವ್ಯವಹಾರಗಳ ಸಚಿವ ಫಾಮ್ ಬಿನ್ ಮಿನ್ ಅವರು ದ್ವಿಪಕ್ಷೀಯ ಸಂಬಂಧ ಕುರಿತು ಚರ್ಚಿಸಲಿದ್ದಾರೆ. ಮುಂದಿನ ತಿಂಗಳು ವಿಯೆಟ್ನಾಂ ಪ್ರಧಾನಿ ಗುಯೆನ್ ಟ್ಯಾನ್ ಡುಂಗ್ ಅವರ ಭಾರತ ಭೇಟಿಯ ಬಗ್ಗೆಯು ಇದೇ ವೇಳೆ ಚರ್ಚೆ ನಡೆಯಲಿದೆ.
ವಾಣಿಜ್ಯ, ಹೂಡಿಕೆ, ಮಾಹಿತಿ ಮತ್ತು ತಂತ್ರಜ್ಞಾನ, ಮಾನವ ಸಂಪನ್ಮೂಲ, ಕೃಷಿ ಸೇರಿದಂತೆ ಹಲವು ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಯಲಿದೆ ಎಂದು ಮಂಗಳವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಯೆಟ್ನಾಂ ಸಮುದ್ರ ತೀರದಲ್ಲಿ ಭಾರತ ನೌಕಾಪಡೆಗೆ ಸೇರಿದ ಐಎನ್ಎಸ್ ಐರಾವತ್ ನೌಕೆಗೆ ಚೀನಾ ನೌಕೆಪಡೆ ನೀಡಿರುವ ಕಿರುಕುಳದ ಬಗ್ಗೆಯು ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಭಾರತದ ಸಹಯೋಗದಲ್ಲಿ ಹನಾಯ್ನಲ್ಲಿ ಐಟಿ ಶಿಬಿರಾರ್ಥಿಗಳಿಗಾಗಿ ಸ್ಥಾಪಿಸಲಾಗಿರುವ ಸಂಪನ್ಮೂಲ ಕೇಂದ್ರವನ್ನು ಕೃಷ್ಣ ಉದ್ಘಾಟಿಸುವರು.