ಮೈಸೂರು: ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಮತ್ತು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಮುಖಂಡ ದಿವಂಗತ ಕೆ. ವೆಂಕಟರಾಮಯ್ಯ ಅವರ ಸ್ಮರಣಾರ್ಥ ನಿರ್ಮಾಣ ಮಾಡಲಾದ ಕೆ.ವಿ. ಭವನವನ್ನು ಬುಧವಾರ ಎಐಟಿಯುಸಿ ಅಧ್ಯಕ್ಷ ಎಂ.ಸಿ. ನರಸಿಂಹನ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಪ್ರತಿಫಲ ಬಯಸದೇ ನಿಸ್ವಾರ್ಥದಿಂದ ದುಡಿದ ವೆಂಕಟರಾಮಯ್ಯ ಅವರಂತ ವ್ಯಕ್ತಿಗಳು ಈಗ ವಿರಳವಾಗುತ್ತಿದ್ದಾರೆ. ಅಂತಹ ಮಹಾನುಭಾವರ ಸಂಖ್ಯೆ ಹೆಚ್ಚಬೇಕು. ಶ್ರಮಿಕರು, ಕಾರ್ಮಿಕರ ಪರವಾಗಿ ಹೋರಾಟಕ್ಕೆ ಇಡೀ ಜೀವನವನ್ನೇ ಮುಡಿಪಾಗಿಟ್ಟರು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಮುಖಂಡ ಶೇಷಾದ್ರಿ ಅವರು, ‘ಕೆ.ವಿ. ವೆಂಕಟರಾಮಯ್ಯ ಅವರ ಕನಸು ಇವತ್ತು ನನಸಾದಂತಾಗಿದೆ. ಅವರು ಎರಡು ವರ್ಷಗಳ ಹಿಂದೆ ನಿಧನರಾದಾಗ ಅವರ ಸ್ಮಾರಕ ಭವನ ಕಟ್ಟುವ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆ ಪ್ರಕಾರ ನಿಗದಿತ ಸಮಯದಲ್ಲಿಯೇ ಕಟ್ಟಡ ಸಂಪೂರ್ಣಗೊಂಡಿದೆ. ಹಲವು ಶ್ರಮಿಕರು, ಕಾರ್ಮಿಕರು ಸ್ವಯಂಪ್ರೇರಿತರಾಗಿ ಉದಾರ ದೇಣಿಗೆ ನೀಡಿದ್ದಾರೆ. ಇದು ವೆಂಕಟರಾಮಯ್ಯ ಅವರ ಜನಪ್ರಿಯತೆಗೆ ನಿದರ್ಶನವಾಗಿದೆ. ಅವರನ್ನು ಮುಖತಃ ನೋಡದೇ ಇರುವ ಎಷ್ಟೋ ಜನರೂ ಕಟ್ಟಡ ನಿರ್ಮಾಣಕ್ಕೆ ಸಹಾಯ ನೀಡಿರುವುದು ವಿಶೇಷ. ವೆಂಕಟರಾಮಯ್ಯ ಅವರಂತಹ ನಿಸ್ವಾರ್ಥ ಮನೋಭಾವದ ಮುಖಂಡರು ಅಪರೂಪವಾಗುತ್ತಿದ್ದಾರೆ’ ಎಂದು ಹೇಳಿದರು.
‘ದೆಹಲಿಯಲ್ಲಿ ಆಮ್ ಆದ್ಮಿ ಅಧಿಕಾರಕ್ಕೆ ಬರುವ ಮೂಲಕ ಬೀಸಿರುವ ಬದಲಾವಣೆಯ ಗಾಳಿಯಂತೆ ನಾವು ಮೈಸೂರಿನಲ್ಲಿ ಬದಲಾ ವಣೆ ತರುತ್ತೇವೆ. ಜನಪರ, ಶ್ರಮಿಕವರ್ಗದ ಪರವಾದ ವಾತಾವರಣ ನಿರ್ಮಾಣಕ್ಕೆ ಶ್ರಮಿಸುತ್ತೇವೆ’ ಎಂದರು. ಅವರು ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು.
ಸಿಪಿಐ ರಾಜ್ಯ ಮಂಡಳಿ ಕಾರ್ಯದರ್ಶಿ ಪಿ.ವಿ. ಲೋಕೇಶ್, ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ವಿ. ಅನಂತ ಸುಬ್ಬರಾವ್, ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಸಿದ್ದನಗೌಡ ಪಾಟೀಲ, ಎಐಟಿಯು ಜಿಲ್ಲಾ ಸಮಿತಿ ಅಧ್ಯಕ್ಷ ರಾಜು ಹಾಜರಿದ್ದರು.
ಸರಸ್ವತಿಪುರಂ ಎರಡನೇ ಮುಖ್ಯರಸ್ತೆಯಲ್ಲಿರುವ ನೂತನ ಕಟ್ಟಡದ ಉದ್ಘಾಟನೆಗೆ ನೂರಾರು ಕಾರ್ಮಿಕರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.