ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್ ಹಿಂದೂ ಸಮಾಜೋತ್ಸವ, ಶೋಭಾಯಾತ್ರೆ

Last Updated 25 ಜನವರಿ 2011, 10:20 IST
ಅಕ್ಷರ ಗಾತ್ರ

ಹೊಸದುರ್ಗ:ಇಲ್ಲಿನ ಹನುಮತ್ ಶಕ್ತಿ ಜಾಗರಣಾ ಸಮಿತಿ ಸೋಮವಾರ ಹಮ್ಮಿಕೊಂಡಿದ್ದ ವಿರಾಟ್ ಹಿಂದೂ ಸಮಾಜೋತ್ಸವದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ನಡೆಯಿತು. ಹುಳಿಯಾರು ರಸ್ತೆಯಲ್ಲಿರುವ ಸಾಯಿಬಾಬಾ ಮಂದಿರದಲ್ಲಿ ಹಿಂದೂ ಸಮಾಜೋತ್ಸವ ನಿಮಿತ್ತ ಬೆಳಿಗ್ಗೆ ಹೋಮ, ಹವನ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಮಧ್ಯಾಹ್ನ ಮಂದಿರದ ಮುಂಭಾಗದಿಂದ ಆರಂಭಗೊಂಡ ಶೋಭಾಯಾತ್ರೆಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ದೇವರುಗಳು, ವೀರಗಾಸೆ, ಚಿಟ್ಟೆಮೇಳ, ನಾಸಿಕ್ ಡೋಲ್ ಮತ್ತಿತರ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು. ಪಟ್ಟಣದ ಪ್ರಮುಖ ಸ್ಥಳದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಸುಮಾರು 108ಕೆ.ಜಿ. ತೂಕದ ಓಂಕಾರ ಘಂಟೆಯನ್ನು ವಿಶೇಷ ವಾಹನದಲ್ಲಿ ತೂಗು ಹಾಕಿ ಶೋಭಾಯಾತ್ರೆಯಲ್ಲಿ ಮೆರವಣಿಗೆ ನಡೆಸಲಾಯಿತು.
"
ಕೇಸರಿ ಧ್ವಜ ಹಿಡಿದು ಹಣೆಗೆ ತಿಲಕ ಇಟ್ಟುಕೊಂಡಿದ್ದ ನೂರಾರು ಸಂಖ್ಯೆ ಯುವಕರು ದೇಶ ಭಕ್ತಿ ಘೋಷಣೆಗಳನ್ನು ಹಾಕುತ್ತಾ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರಿಗೆ ಸ್ಥಳೀಯ ಮುಸ್ಲಿಂ ಸಮಾಜ ಹಾಗೂ ಆಲಂಪಲ್ಲಿ ಕುಟುಂಬದವರು ಪಾನಕ ಹಾಗು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಪಟ್ಟಣದ ಮಹಾಲಕ್ಷ್ಮೀ ಚಿತ್ರಮಂದಿರದ ಮುಂಭಾಗ ಶೋಭಾಯಾತ್ರೆ ಆಗಮಿಸುತ್ತಿದ್ದಂತೆ ಮುಸ್ಲಿಂ ಸಮಾಜದ ಮುಖಂಡರು ಯಾತ್ರೆಯಲ್ಲಿ ಭಾಗವಹಿಸಿದ್ದ ಹಿಂದೂಪರ ಸಂಘಟನೆಯ ಮುಖಂಡರ ಮೇಲೆ ಪುಷ್ಪವೃಷ್ಟಿ ಸುರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಶೋಭಾಯಾತ್ರೆಯಲ್ಲಿ ಜಿ.ಪಂ. ನೂತನ ಸದಸ್ಯರಾದ ಡಿ. ಪರಶುರಾಮಪ್ಪ, ಆರ್. ಹನುಮಂತಪ್ಪ, ಎಂ. ಲಕ್ಷ್ಮಣ್, ಪುರಸಭೆ ಅಧ್ಯಕ್ಷ ಎಚ್.ಬಿ. ಮಂಜುನಾಥ್, ಸದಸ್ಯ ವೃಷಭೇಂದ್ರಪ್ಪ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್. ಲಿಂಗಮೂರ್ತಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ  ಆರ್.ಡಿ. ಸೀತಾರಾಂ, ಜಿ.ಪಂ. ಸದಸ್ಯ ಡಿ. ಗುರುಸ್ವಾಮಿ, ಆರ್‌ಎಸ್‌ಎಸ್ ಕಾರ್ಯವಾಹಕ್ ಪರಮೇಶ್, ಹಿಂದೂಪರ ಸಂಘಟನೆಗಳ ಮುಖಂಡರಾದ ರಂಗವ್ವನಹಳ್ಳಿ ಶಂಕರಪ್ಪ, ಆಲಘಟ್ಟ ಪರಮೇಶ್ವರಪ್ಪ, ಶಿವಮೂರ್ತಿ, ನಾಗರಾಜಗುಪ್ತ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT