ಹೊಸಪೇಟೆ: ಮಹಾಶಿವರಾತ್ರಿ ಅಂಗವಾಗಿ ಬುಧವಾರ ಹಂಪಿಯಲ್ಲಿ ಶ್ರೀವಿರೂಪಾಕ್ಷನ ದರ್ಶನಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತ ಸಾಗರವೇ ಹರಿದು ಬಂದಿತು. ವಿದೇಶಿಯರೂ ಸರದಿಯಲ್ಲಿ ನಿಂತು ವಿರೂಪಾಕ್ಷನ ದರ್ಶನ ಪಡೆದಿದ್ದು ಕಂಡುಬಂತು.
ಬೆಳಿಗ್ಗೆ ಶ್ರೀವಿದ್ಯಾರಣ್ಯ ಭಾರತಿ ಸ್ವಾಮೀಜಿ ವಿರೂಪಾಕ್ಷೇಶ್ವರನಿಗೆ ಜಲಾಭಿಷೇಕ, ಕ್ಷೀರಾಭಿಷೇಕ ಸೇರಿದಂತೆ ಪಂಚಾಮೃತಾಭಿಷೇಕಗಳನ್ನು ಮಾಡಿದರು.
ವಿಜಯನಗರ ಸಾಮ್ರಾಜ್ಯದ ಪ್ರಖ್ಯಾತ ಅರಸ ಶ್ರೀಕೃಷ್ಣದೇವರಾಯನ ಪಟ್ಟಾಭಿಷೇಕದ ಸವಿನೆನೆಪಿಗಾಗಿ ವಿರೂಪಾಕ್ಷನಿಗೆ ನೀಡಿದ್ದ ಬಂಗಾರದ ಮುಖಕಮಲವನ್ನು ವಿದ್ಯಾರಣ್ಯ ಭಾರತಿ ಸ್ವಾಮೀಜಿ ವಿರೂಪಾಕ್ಷೇಶ್ವರನಿಗೆ ತೊಡಿಸಿ ಹೂವು, ಬಿಲ್ವ ಪತ್ರೆಗಳಿಂದ ಹಾಗೂ ರೇಷ್ಮೆ ವಸ್ತ್ರದಿಂದ ಅಲಂಕರಿಸಿದರು. ಮಹಾಶಿವರಾತ್ರಿ ಅಂಗವಾಗಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ಪ್ರತಿಗಂಟೆಗೊಮ್ಮೆ ರುದ್ರಾಭಿಷೇಕ ಮಾಡಲಾಯಿತು. ಬುಧವಾರ ಸಂಜೆ 6ರಿಂದ ಗುರುವಾರ ಬೆಳಗಿನ ಜಾವ 4 ಗಂಟೆ ವರೆಗೆ ನಾಲ್ಕು ಯಾಮಗಳಲ್ಲಿ ವಿಶೇಷವಾಗಿ ಮಹಾರುದ್ರಾಭಿಷೇಕ ನೆರವೇರಿಸಲಾಯಿತು.
ಶಿವರಾತ್ರಿ ನಿಮಿತ್ತ ಒಂದು ಲಕ್ಷಕ್ಕೂ ಅಧಿಕ ಭಕ್ತರು ವಿರೂಪಾಕ್ಷನ ದರ್ಶನ ಪಡೆದರು. ಅಹೋರಾತ್ರಿ ಸಂಗೀತ, ಹರಿಕಥೆ, ಭಜನೆ ಸೆರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.