ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನಡುವೆ 2002ರ ಗುಜರಾತ್ ಗಲಭೆ ಸಂದರ್ಭದಲ್ಲಿ ನಡೆದಿರುವ ಪತ್ರ ವ್ಯವಹಾರವನ್ನು ಬಹಿರಂಗಪಡಿಸಲು ಪ್ರಧಾನಿ ಕಾರ್ಯಾಲಯ(ಪಿಎಂಒ) ನಿರಾಕರಿಸಿದೆ.
ತಪ್ಪಿತಸ್ಥರ ತನಿಖೆ, ಬಂಧನ ಅಥವಾ ವಿಚಾರಣೆ ಪ್ರಕ್ರಿಯೆಗೆ ಅಡ್ಡಿಯಾಗುವಂತಿದ್ದರೆ ಮಾಹಿತಿ ಬಹಿರಂಗಪಡಿಸದಿರಲು ಅವಕಾಶ ಇದೆ ಎಂದು ಪಾರದರ್ಶಕತೆ ಕಾಯ್ದೆಯ 8 (1) ಎಚ್ ಸೆಕ್ಷನನ್ನು ಉಲ್ಲೇಖಿಸಿ ಪಿಎಂಒ ಈ ಮಾಹಿತಿ ಕೇಳಿರುವ ಮಾಹಿತಿ ಹಕ್ಕು ಅರ್ಜಿಗೆ ಪ್ರತಿಕ್ರಿಯೆ ನೀಡಿದೆ.
ಪಿಎಂಒ ಈ ಪ್ರತಿಕ್ರಿಯೆ, ವಾಜಪೇಯಿ ಮತ್ತು ಮೋದಿ ನಡುವಿನ ಸಂವಹನದಲ್ಲಿ ಗಲಭೆಗೆ ಸಂಬಂಧಿಸಿದ ಅಥವಾ ಗಲಭೆಯ ಹಿಂದಿನ ಜನಗಳ ಬಗ್ಗೆ ಮಾಹಿತಿ ಇರಬಹುದು ಎಂಬ ಅನುಮಾನ ಹುಟ್ಟುಹಾಕಿದೆ.
ಪಿಎಂಒ ಮತ್ತು ಗುಜರಾತ್ ಸರ್ಕಾರದ ನಡುವೆ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿ ಫೆಬ್ರುವರಿ 27, 2002 ಮತ್ತು ಏಪ್ರಿಲ್ 30, 2002ರ ನಡುವೆ ನಡೆದಿರುವ ಎಲ್ಲ ಸಂವಹನದ ಪ್ರತಿ ಒದಗಿಸುವಂತೆ ಅರ್ಜಿ ಸಲ್ಲಿಸಲಾಗಿತ್ತು.