ಆಗ್ರಾ(ಪಿಟಿಐ): ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಮುಸ್ಲಿಂ ಸಮುದಾಯದ ಪ್ರಮುಖ ಧುರೀಣ ಆಜಂ ಖಾನ್ ಗೈರುಹಾಜರಾಗಿರುವ ವಿವಾದ ಅಷ್ಟೊಂದು ಗಂಭೀರ ವಿಚಾರವಲ್ಲ ಎಂದು ತೋರಿಸಿಕೊಳ್ಳುವ ಯತ್ನ ಮಾಡುತ್ತಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಅವರು, ‘ಖಾನ್ ಯಾವತ್ತೂ ತಮಗೆ ನಿರಾಶೆ ಉಂಟು ಮಾಡಿಲ್ಲ’ ಎಂದರು.
‘ನಮ್ಮದು ಸರ್ವಾಧಿಕಾರಿಗಳ ಪಕ್ಷವಲ್ಲ, ಪ್ರಜಾಪ್ರಭುತ್ವ ತತ್ವದ ಪಕ್ಷ, ಖಾನ್ ಸಭೆಗೆ ಹಾಜರಾಗಿಲ್ಲ ಎಂದಾಕ್ಷಣ ಅವರು ತಮಗೆ ನಿರಾಶೆ ಉಂಟು ಮಾಡುತ್ತಾರೆ ಎಂದರ್ಥವಲ್ಲ’ ಎಂದು ಮುಲಾ ಯಂ ಸಮಜಾಯಿಷಿ ನೀಡಿದರು.
ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರೂ ಹಾಜರಿದ್ದರು. ಹಲವು ಖಾತೆ ಗಳನ್ನು ಹೊಂದಿದ್ದರೂ ಖಾನ್ ಅವರು ಸಚಿವ ಸಂಪುಟ ಸಭೆಗೆ ಗೈರು ಹಾಜರಿರುವ ಬಗ್ಗೆ ಕೇಳಿ ದಾಗ, ‘ಈ ಪ್ರಶ್ನೆಯನ್ನು ಮುಖ್ಯ ಮಂತ್ರಿ ಅವರಿಗೆ ಕೇಳಿ’ ಎಂದರು.
ಆಗ ಅಖಿಲೇಶ್ ಅವರು, ‘ಇಲ್ಲಿ ಏನು ಹೇಳಲಿ’ ಎಂದು ಹಾರಿಕೆಯ ಉತ್ತರ ನೀಡಿದರು.