ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿ ಪದವಿ ಸಮಕಾಲೀನ ಸ್ಥಿತಿಗೆ ಒಗ್ಗುತ್ತಿಲ್ಲ

Last Updated 10 ಜನವರಿ 2012, 10:15 IST
ಅಕ್ಷರ ಗಾತ್ರ

ಧಾರವಾಡ: “ವಿಶ್ವವಿದ್ಯಾಲಯಗಳ ಪದವಿ ಅಧ್ಯಯನಗಳು ಸಮಕಾಲೀನ ಪರಿಸ್ಥಿತಿಗೆ ಒಗ್ಗುತ್ತಿಲ್ಲ. ವಿದ್ಯಾರ್ಥಿಗಳು ಕೇವಲ ರೂಢಿಗತ ಕಂಠಪಾಠದ ಮಾದರಿಯಲ್ಲಿ ಓದುವುದನ್ನು ರೂಢಿಸಿಕೊಳ್ಳುತ್ತಿದ್ದಾರೆ. ಇದರಿಂದ ಅವರಲ್ಲಿ ಮೂಲಭೂತ ಜ್ಞಾನವಾಗಲಿ, ಚಿಕಿತ್ಸಕ ಪ್ರಜ್ಞೆ ಯಾಗಲಿ ಅಷ್ಟಾಗಿ ಬೆಳೆಯುತ್ತಿಲ್ಲ~ ಎಂದು ರಾಷ್ಟ್ರೀಯ ವಿಜ್ಞಾನ ಪದಕ ಪುರಸ್ಕೃತ ಪ್ರೊ. ಸಿ.ಆರ್.ರಾವ್ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದ 62ನೇ ಘಟಿ ಕೋತ್ಸವ ಭಾಷಣ ಮಾಡಿದ ಅವರು, ಕಲಿಸುವಿಕೆ ಮತ್ತು ಕಲಿಯುವಿಕೆಯಲ್ಲಿ ಉತ್ಕೃಷ್ಟತೆ ತರುವ ಅಗತ್ಯವಿದೆ. ಸಾಂಪ್ರದಾಯಿಕವಾದ ಭಾರತೀಯ ಶಿಕ್ಷಣ ವ್ಯವಸ್ಥೆ, ಮೌಲ್ಯಶ್ರೇಣಿ, ನಂಬಿಕೆ, ನಡ ವಳಿಕೆ, ಸಂಸ್ಕೃತ ಮುಂತಾದ ಸಂಗತಿಗಳು ವೈಜ್ಞಾ ನಿಕ ಸಂಶೋಧನೆಗೆ ಪೂರಕವಾಗಿಲ್ಲ ಎಂಬ ಅಭಿಪ್ರಾಯವಿದೆ ಎಂದರು.

`ಅಣು ಶಕ್ತಿಯ ವಿರುದ್ಧದ ಭಾರತದ ನಿಲುವು, ಆಹಾರ ಉತ್ಪಾದನೆಯ ಪ್ರಮಾಣ ಮತ್ತು ಗುಣಮಟ್ಟ ಸುಧಾರಣೆಯಲ್ಲಿನ ಅಸಮರ್ಪಕ ನಿಲುವು, ಹೆಚ್ಚುತ್ತಿರುವ ಜನಸಂಖ್ಯೆಗೆ ಸರಿ ದೂಗಿಸಬಲ್ಲ ಆಹಾರ ಉತ್ಪಾದನೆಯಲ್ಲಿ ವೈಫಲ್ಯ ಮುಂತಾದವುಗಳು ಭಾರತ ವಿಜ್ಞಾನ ವಿರೋಧಿ ಧೋರಣೆಯ ರಾಷ್ಟ್ರವಾಗಿದೆ ಎಂಬ ಅಭಿಪ್ರಾಯ ಪಡಲು ಪೂರಕಗಳಾಗಿವೆ. ಆದ್ದರಿಂದ ನಾವು ಚರ್ಚೆ ಮತ್ತು ಸಂವಾದದ ಮೂಲಕ ಒಂದು ನಿರ್ಧಾರಕ್ಕೆ ಬಂದಲ್ಲಿ ಇಂಥ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬಹುದು. ಈ ಜವಾಬ್ದಾರಿಯನ್ನು ಯುವ ಪದವೀಧರರು ಹೊತ್ತುಕೊಳ್ಳಬೇಕು~ ಎಂದು ಸಲಹೆ ನೀಡಿದರು.

`ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ನಿಷ್ಠೆಯಿಂದ ದುಡಿಯಬಲ್ಲ ಅರ್ಹ ವಿಜ್ಞಾನಿಗಳ ಮತ್ತು ತಂತ್ರಜ್ಞಾನಿಗಳ ದೊಡ್ಡ ಪಡೆ ಇಂದು ಭಾರತಕ್ಕೆ ಬೇಕಾಗಿದೆ. ಹೊಸ ಶೋಧ ಮತ್ತು ಜ್ಞಾನ ಪರಂಪರೆಯ ಬಲದಿಂದ ಶಿಕ್ಷಣ, ವ್ಯಾಪಾರ- ವ್ಯವಹಾರ ಹಾಗೂ ಕೈಗಾರಿಕಾ ಕ್ಷೇತ್ರ ಗಳ ಉತ್ಪಾದಕತೆಯನ್ನು ಹೆಚ್ಚಿಸಬಲ್ಲ ಸಮರ್ಥ ಸಂಶೋಧಕರ ಅಗತ್ಯವಿದೆ~ ಎಂದರು.

`ವಿಜ್ಞಾನ- ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರ ತಕ್ಕೆ ತನ್ನದೇ ಆದ ಪರಂಪರೆ ಇದೆಯಾದರೂ ಇತರ ದೇಶಗಳು ನಮಗಿಂತ ಬಹಳ ಮುಂದೆ ಸಾಗಿವೆ. ಮುಂದಿನ 20 ವರ್ಷಗಳಲ್ಲಿ ಸಂಶೋಧನೆಯಲ್ಲಿ ಅಗ್ರಗಣ್ಯ ಸ್ಥಾನ ಪಡೆಯುವ ನಿಟ್ಟಿನಲ್ಲಿ ಭಾರತ ಯುದ್ಧೋಪಾದಿಯಲ್ಲಿ ಕಾರ್ಯ ಮಾಡ ಬೇಕಿದೆ. ಅದಕ್ಕಾಗಿ ಶೈಕ್ಷಣಿಕ ಅವಕಾಶಗಳ ವಿಸ್ತ ರಣೆ ಹಾಗೂ ಹೈಟೆಕ್ ಸಂಶೋಧನ ಸೌಕರ್ಯ ಗಳ ವಿಸ್ತರಣೆಯಂಥ ಕ್ರಮಗಳನ್ನು ತುರ್ತಾಗಿ ಜಾರಿಗೆ ತರಬೇಕು~ ಎಂದು ರಾವ್ ಹೇಳಿದರು.

`ಭಾರತೀಯ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ತನ್ನ ಪ್ರಗತಿ ಮತ್ತು ಆದಾಯದ ಪ್ರಮಾಣ ಗಳಿಗಾಗಿ ಸಣ್ಣ ಪುಟ್ಟ ಕುಶಲತೆಗಳನ್ನು ಹೆಚ್ಚಾಗಿ ಅವಲಂಬಿಸಿದೆ ಹೊರತು ಸಂಶೋಧನೆಗಳತ್ತ ಮುಖ ಮಾಡುತ್ತಿಲ್ಲ ಎಂದ ಅವರು, ದೇಶದಲ್ಲಿ ಸಂಶೋಧಕರ ಸಂಖ್ಯೆ ಬಹಳ ಕಡಿಮೆಯಿದೆ. ಈ ಬಗ್ಗೆ ಗಂಭೀರವಾಗಿ ಆಲೋಚಿಸುವ ಅಗತ್ಯವಿದೆ. ಪದವೀಧರರು ಉನ್ನತ ಮಹತ್ವಾಕಾಂಕ್ಷೆ ಯೊಂದಿಗೆ ಸಂಶೋಧಕರ ಪಡೆಗೆ ಸೇರ್ಪಡೆ ಯಾಗಬೇಕು~ ಎಂದರು.

`ಜಗತ್ತಿನ್ಲ್ಲಲೇ ಭಾರತ ಹೆಚ್ಚಿನ ಸಂಖ್ಯೆಯ ಯುವಕರನ್ನು ಹೊಂದಿದೆ. ಆದರೆ ಬಹುಪಾಲು ಯುವಕರಿಗೆ ಉನ್ನತ ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂಥವರಿಗೆ ಉನ್ನತ ಶಿಕ್ಷಣ ಪಡೆದುಕೊಳ್ಳಲು ಉತ್ತೇಜಿಸಿ ಸೂಕ್ತ ಸೌಕರ್ಯ ಗಳನ್ನು ಒದಗಿಸಬೇಕು. ಅಂದಾಗ ಮಾತ್ರ ಅವರು ಸಂಶೋಧಕರಾಗಿ ರೂಪುಗೊಳ್ಳಲು ಸಾಧ್ಯವಾಗು ತ್ತದೆ. ಭಾರತವು ವಿಶ್ವ ಮಟ್ಟದ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುವುದು ಸಾಧ್ಯ ವಾಗುತ್ತದೆ~ ಎಂದು ಅಭಿಪ್ರಾಯಪಟ್ಟರು.

ವಿಶ್ವದ ಪ್ರಾಚೀನ ನಾಗರಿಕತೆಗಳಲ್ಲಿ ಒಂದಾ ಗಿರುವ ಭಾರತ ಶ್ರೀಮಂತವಾಗಿರುವ ವಿದ್ವತ್‌ಪರಂಪರೆ ಹೊಂದಿದೆ. ಎದೆಗುಂದಿಸುವ ಎಷ್ಟೇ ಸಮಸ್ಯೆಗಳು ಎದುರಾದರೂ ಭಾರತೀಯರು ಧೈರ್ಯವನ್ನು ಕಳೆದುಕೊಳ್ಳಬೇಕಾಗಿಲ್ಲ.

ಎಲ್ಲಿ ಪ್ರಗತಿ ಇದೆಯೋ ಅಲ್ಲಿ ಸಮೃದ್ಧಿ, ಸಮಾಧಾನ ವಿರುತ್ತದೆ ಎಂಬ ಆಶಾಭಾವ ನಮ್ಮದಾಗಬೇಕು. ಒಟ್ಟಾರೆ ಭಾರತದ ವಿದ್ವತ್‌ಪರಂಪರೆಯ ಗತ ವೈಭವವು ಯುವಶಕ್ತಿಯಿಂದ ಮತ್ತೆ ಪುನರುತ್ಥಾ ನಗೊಳ್ಳಲಿ. ಭಾರತವು ವಿಶ್ವಮಟ್ಟ ಜ್ಞಾನಸೃಷ್ಟಿ ಮತ್ತು ಪ್ರಸಾರದ ಕೇಂದ್ರವಾಗಲಿ~ ಎಂದು ಪ್ರೊ. ರಾವ್ ಆಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT