ಬಳ್ಳಾರಿ: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಆಯೋಜಿಸಿದ್ದ ಪದವಿಯ ಸೆಮಿಸ್ಟರ್ ಪರೀಕ್ಷೆಗಳ ಮೌಲ್ಯಮಾಪನದಲ್ಲಿ ಲೋಪಗಳಿಲ್ಲ, ವಿದ್ಯಾರ್ಥಿ ಸಂಘಟನೆಯು ಈ ಕುರಿತು ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಕುಲಪತಿಯವರು ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ವಿವಿ ವಿದ್ಯಾರ್ಥಿಗಳ ಹೋರಾಟ ಸಮಿತಿ ತಿಳಿಸಿದೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಐಡಿಎಸ್ಓ ರಾಜ್ಯ ಕಾರ್ಯದರ್ಶಿಯಾದ ಸಮಿತಿಯ ಸಂಚಾಲಕ ಡಾ.ಪ್ರಮೋದ್, ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ನಡೆದಿರುವ ಲೋಪಗಳ ಕುರಿತು ವಿದ್ಯಾರ್ಥಿಗಳು ಪಡೆದಿರುವ ಉತ್ತರ ಪತ್ರಿಕೆಯ ಫೋಟೊ ಕಾಪಿಯಲ್ಲಿ ಸಾಬೀತಾಗಿದ್ದು, ಅದರ ಪ್ರತಿಗಳನ್ನು ಕುಲಪತಿಯವರಿಗೆ ಸಲ್ಲಿಸಲಾಗಿದೆ. ಆದರೂ ಅವರು ಈ ಕುರಿತು ಗಂಭೀರ ಕ್ರಮ ಕೈಗೊಳ್ಳದೆ, ಲೋಪಗಳಿಲ್ಲ ಎಂಬ ಹೇಳಿಕೆ ನೀಡಿರುವುದು ಅನೇಕ ವಿದ್ಯಾರ್ಥಿಗಳನ್ನು ಘಾಸಿ ಗೊಳಿಸಿದೆ ಎಂದರು.
ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಸಮರ್ಪಕವಾಗಿ ಪಾಠಗಳು ನಡೆಯುತ್ತಿಲ್ಲ, ಪರೀಕ್ಷಾ ಪದ್ಧತಿ ಸುಧಾರಣೆ ಗಾಗಿ ಅನೇಕ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿರುವ ಕುಲಪತಿ ಡಾ.ಮಂಜಪ್ಪ ಡಿ. ಹೊಸಮನೆ ಅವರು, ವಿದ್ಯಾರ್ಥಿ ಸಂಘಟನೆ ನೀಡಿರುವ ಫೋಟೊ ಕಾಪಿಗಳನ್ನು ಪರಿಶೀಲಿಸುವ ಗೋಜಿಗೇ ಹೋಗಿಲ್ಲ ಎಂದು ಆರೋಪಿಸಿದರು.
ಕುಲಪತಿಯವರು ಹಾಗೂ ಮೌಲ್ಯಮಾಪನ ಕುಲಸಚಿವರು ಸಮರ್ಪಕ ಕ್ರಮದ ಭರವಸೆ ನೀಡಿದ್ದರೂ, ಈ ರೀತಿ ವಿದ್ಯಾರ್ಥಿ ವಿರೋಧಿ ಹೇಳಿಕೆ ನೀಡಿರುವುದು ವಿದ್ಯಾರ್ಥಿಗಳಲ್ಲಿ ತೀವ್ರ ನಿರಾಸೆ, ಆಘಾತ ಮೂಡಿಸಿದೆ.
ವಿದ್ಯಾರ್ಥಿಗಳು ಶುಲ್ಕ ಪಾವತಿಸಿ ಪಡೆದಿರುವ ಉತ್ತರ ಪತ್ರಿಕೆಯ ಫೋಟೊ ಕಾಪಿಗಳಲ್ಲಿ, ಉತ್ತರ ಸಮರ್ಪಕವಾಗಿದ್ದರೂ ಅಂಕ ನೀಡದಿರುವುದು ಕಂಡುಬಂದಿದೆ ಎಂದರು.