ಚನ್ನಗಿರಿ: ದೇಶಕ್ಕೆ ಅನ್ನ ಕೊಡುವ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ನಿರಂತರ ವಿದ್ಯುತ್ ಸರಬರಾಜು, ಕೊಳೆ ರೋಗಕ್ಕೆ ಪರಿಹಾರ ಸೇರಿದಂತೆ ಹಲವಾರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕು ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಎಲ್ಲರಿಗೂ ಅನ್ನ ಕೊಡುವ ರೈತರು ಬಿಸಿಲು ಮಳೆ ಲೆಕ್ಕಿಸದೇ ಜಮೀನಿನಲ್ಲಿ ಕಷ್ಟಪಟ್ಟು ದುಡಿದು ಬೆಳೆ ಬೆಳೆದು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ನಿಖರವಾದ ಬೆಲೆ ಸಿಗುತ್ತಿಲ್ಲ. ಇದರಿಂದ ರೈತರು ಸಾಲಗಾರರು ಆಗುವಂತಾಗಿದೆ. ಮೊದಲು ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು.
ರೈತರ ಪಂಪ್ಸೆಟ್ಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು. ರೈತನ ಜಮೀನು ಅಳತೆ ಸ್ಕೆಚ್ಗೆ ದುಪ್ಪಟ್ಟು ಶುಲ್ಕ ಹೆಚ್ಚಳ ಮಾಡಲಾಗಿದೆ. ತಾತ್ಕಾಲಿಕ ಪೋಡಿ ಶುಲ್ಕ 100 ಪಟ್ಟು ಹೆಚ್ಚಳ ಮಾಡಿದ್ದಾರೆ. ಹಿಂದೆ ಇದ್ದ ₨ 45 ಮುಟೇಷನ್ ಶುಲ್ಕ ಸರ್ಕಾರ ಮುಂದುವರಿಸಬೇಕು. ಈ ಬಗ್ಗೆ ನ.1ರಂದು ಪರವಾನಗಿ ಸರ್ವೆ ಅವರು ಆದೇಶ ಮಾಡಿರುವುದನ್ನು ರದ್ದುಪಡಿಸಿ, ಸರ್ಕಾರಿ ಸರ್ವೆ ಅವರಿಂದಲೇ ರೈತರ ಜಮೀನು ಅಳತೆ ಸ್ಕೆಚ್, ಬಾಕಿ ಇರತಕ್ಕ ಮುಟೇಷನ್, ಪೋಡಿ ಅಳತೆ, ಹದ್ದಬಸ್ತ್ ಅಳತೆ, ಅಲಿನೇಷನ್ ಅಳತೆ ಹಾಗೂ ಪಕ್ಕ ಪೋಡಿ ಅಳತೆಗಳನ್ನು ಮಾಡಿಸಿಕೊಡಬೇಕು.
ಅದೇ ರೀತಿ ಜಿಲ್ಲೆಯಲ್ಲಿ ಕಳೆದ ಬಾರಿ ಮುಂಗಾರು ಮಳೆ ಹೆಚ್ಚಳದಿಂದ ಅಡಿಕೆ ಬೆಳೆಗೆ ಕೊಳೆ ರೋಗ ಬಿದ್ದಿದ್ದು, ಕೂಡಲೇ ಸರ್ಕಾರ ಬೆಳೆಗಾರರಿಗೆ ಪರಿಹಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿ
ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ರೈತ ಸಂಘದ ಜಿಲ್ಲಾ ಹಿರಿಯ ಉಪಾಧ್ಯಕ್ಷ ನಾಗೇನಹಳ್ಳಿ ಹಾಲಪ್ಪ ತಿಳಿಸಿದರು.
ಪಟ್ಟಣದ ಬಸ್ನಿಲ್ದಾಣದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಸರ್ಕಾರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಾಗಿ ಬಂದು ಗಾಂಧಿ ವೃತ್ತದಲ್ಲಿ ಹೆದ್ದಾರಿ ತಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಶೀಲ್ದಾರ್ ಕಚೇರಿಗೆ ಆಗಮಿಸಿ ಪ್ರಭಾರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಗೌರವಾಧ್ಯಕ್ಷ ಎನ್.ಜಿ. ಕುಬೇಂದ್ರಪ್ಪ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎನ್.ಕೆ. ಲಕ್ಷ್ಮೀಪತಿ, ಜಿ. ಕೃಷ್ಣಪ್ಪ, ಸುಣಿಗೆರೆ ಪರಮೇಶ್ವರಪ್ಪ, ಜಿ.ಇ. ನಾಗೇಂದ್ರಪ್ಪ, ಕೆ.ಇ. ನಾಗರಾಜಪ್ಪ, ಜಿ. ರಾಜಣ್ಣ, ಶಿವಮೂರ್ತಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.