ಬೀದರ್: ನಗರ ಸೇರಿದಂತೆ ಜಿಲ್ಲೆಯ ವಿವಿಧಡೆ ಶುಕ್ರವಾರವು ವರುಣನ ಕೃಪೆ ಮುಂದುವರೆದಿದ್ದು, ಸಾಧಾರಣದಿಂದ ಧಾರಾಕಾರ ಮಳೆಯಾಗಿದೆ. ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಈ ಮಳೆ ಪೂರಕವಾಗಿರುವುದರಿಂದ ಕೃಷಿಕನ ಮೊಗದಲ್ಲಿಯೂ ಸಮಾಧಾನ ಮೂಡಿದೆ.
ಶುಕ್ರವಾರ ದಿನವಿಡಿ ಆಗಸದಲ್ಲಿ ಮೊಡಕವಿದ ವಾತಾವರಣ ಇದ್ದು, ಮಧ್ಯಾಹ್ನ ಜಿನುಗುನಿಂದ ಕೂಡಿದ ಸಾಧಾರಣ ಮಳೆ ಸುರಿದರೆ, ಸಂಜೆ ಕೆಲಹೊತ್ತು ಧಾರಾಕಾರ ಮಳೆ ಸುರಿಯಿತು. ಬಸವಕಲ್ಯಾಣ, ಔರಾದ್ ಹಾಗೂ ಭಾಲ್ಕಿ ತಾಲ್ಲೂಕುಗಳಲ್ಲಿಯೂ ಉತ್ತಮ ಮಳೆಯಾದ ವರದಿ ಇದ್ದು, ಹುಮನಾಬಾದ್ ತಾಲ್ಲೂಕಿನ ಮಳೆ ಪ್ರಮಾಣ ಕಡಿಮೆ ಇತ್ತು. ಬಿತ್ತನೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಕಬ್ಬು, ಉದ್ದು, ಹೆಸರು. ಸೋಯಾಬಿನ್ ಬೆಳೆಗೆ ಈ ಮಳೆ ಪೂರಕವಾಗಿದೆ ಎಂಬ ಅಭಿಪ್ರಾಯ ರೈತರದು.