ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ರೂ. 52 ಲಕ್ಷ ನಗದು ವಶ

Last Updated 25 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಅಕ್ರಮವಾಗಿ ಸಾಗಿಸುತ್ತಿದ್ದ ರೂ52.12 ಲಕ್ಷ ನಗದು ಹಾಗೂ ಕನಕಪುರದಲ್ಲಿ ರೂ12.67 ಲಕ್ಷ ಬೆಲೆ ಬಾಳುವ ಸೌರಶಕ್ತಿ ದೀಪಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನಿಲ್‌ಕುಮಾರ್ ಝಾ ತಿಳಿಸಿದರು.

ಶ್ರೀರಂಗಪಟ್ಟಣ ವರದಿ: ವಿರಾಜಪೇಟೆಯಿಂದ ಬೆಂಗಳೂರಿಗೆ ಇನ್ನೋವಾ ಕಾರಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ರೂ19.5 ಲಕ್ಷ ಹಣವನ್ನು ಚುನಾವಣಾ ಸ್ಥಿರ ಜಾಗೃತ ದಳ ಅಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ.

ತಾಲ್ಲೂಕಿನ ಗಡಿ ಭಾಗದ ಕಳಸ್ತವಾಡಿ ಬಳಿ ಕಾರು ತಪಾಸಣೆ ನಡೆಸಿದ ವೇಳೆ ಕೈ ಚೀಲದಲ್ಲಿ ಇದ್ದ ರೂ  19.5 ಲಕ್ಷ ಹಣ ಪತ್ತೆಯಾಗಿದೆ. ವಿರಾಜಪೇಟೆ ಮೂಲದ ಚಿನ್ನಾಭರಣ ವ್ಯಾಪಾರಿ ಶೂಯಿಬ್ ಎಂಬುವವರಿಂದ ಈ ಹಣ ವಶಪಡಿಸಿಕೊಳ್ಳಲಾಗಿದೆ. ವಿರಾಜಪೇಟೆಯಲ್ಲಿ ತಮ್ಮ ಚಿನ್ನಾಭರಣದ ಅಂಗಡಿ ಇದ್ದು, ಆಭರಣ ಖರೀದಿಗೆ ಬೆಂಗಳೂರಿಗೆ ತೆರಳುತ್ತಿದ್ದುದಾಗಿ ಶೂಯಿಬ್ ತಿಳಿಸಿದರು. ಹಣಕ್ಕೆ ಅಗತ್ಯ ದಾಖಲೆ ಇಲ್ಲದ ಕಾರಣ ಪೊಲೀಸರು ಆದಾಯ ತೆರಿಗೆ ಇಲಾಖೆ ಅಧಿಕಾರಿಗೆ ಹಣ ವರ್ಗಾಯಿಸಿದರು.

ಮದ್ಯ ವಶ (ಮಂಡ್ಯ ವರದಿ): ಜಿಲ್ಲೆಯ ಪಾಂಡವಪುರದಿಂದ ಮೇಲುಕೋಟೆಗೆ ಹೋಗುತ್ತಿದ್ದ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 15 ಬಾಕ್ಸ್ `ಹೈವಾರ್ಡ್ಸ್' ಮದ್ಯವನ್ನು ಕಾರು ಸಮೇತ ವಶಪಡಿಸಿಕೊಳ್ಳಲಾಗಿದೆ.

ಅಬಕಾರಿ ಸಬ್‌ಇನ್‌ಸ್ಪೆಕ್ಟರ್ ಗೋಪಾಲಕೃಷ್ಣ ತಂಡದವರು, ರೂ  60 ಸಾವಿರ  ಬೆಲೆ ಬಾಳುವ ಮದ್ಯ  ವಶಪಡಿಸಿಕೊಂಡಿದ್ದಾರೆ. ಜತೆಗೆ ಇಬ್ಬರು ಆರೋಪಿಗಳನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ಡಿಸಿ ಎಚ್.ಎನ್. ಆನಂದ್ ತಿಳಿಸಿದ್ದಾರೆ.

ರೂ6.89 ಲಕ್ಷ ನಗದು ವಶ (ಮೈಸೂರು ವರದಿ): ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮದಲ್ಲಿ ದಾಖಲಾತಿ ಇಲ್ಲದೆ ಗುರುವಾರ ಸಂಜೆ ಸಾಗಿಸುತ್ತಿದ್ದ ರೂ6.89 ಲಕ್ಷ ನಗದನ್ನು ಚುನಾವಣಾ ಸಂಚಾರ ದಳ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಚಲುವೇಗೌಡ ಎಂಬುವರು ಮ್ಯಾಕ್ಸಿಕ್ಯಾಬ್‌ನಲ್ಲಿ ಹಣ ಸಾಗಿಸುತ್ತಿದ್ದ ವೇಳೆ ಸಂಚಾರ ದಳ ಅಧಿಕಾರಿಗಳು ವಾಹನ ತಪಾಸಣೆ ಮಾಡಿದಾಗ ಹಣ ಸಿಕ್ಕಿದೆ. 

ಭೋಗಾದಿಯಲ್ಲಿ ಹಣ ವಶ: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಭೋಗಾದಿಯಲ್ಲಿ  ರೂ1 ಲಕ್ಷ ವಶಪಡಿಸಿಕೊಳ್ಳಲಾಗಿದೆ.
ಕೊಳ್ಳೇಗಾಲ: ರೂ50 ಸಾವಿರ ವಶಪಡಿಸಿಕೊಳ್ಳಲಾಗಿದೆ.

ರೂ18 ಲಕ್ಷ ಮೌಲ್ಯದ ಮದ್ಯ ವಶ (ಶಿವಮೊಗ್ಗ ವರದಿ): ಭದ್ರಾವತಿ ಹಾಗೂ ಶಿಕಾರಿಪುರದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ರೂ18 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಮದ್ಯವನ್ನು ಅಬಕಾರಿ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ಶುಕ್ರವಾರ ವಶಕ್ಕೆ ಪಡೆಯಲಾಗಿದೆ.

ಅಕ್ರಮ ಮದ್ಯ ವಶ- ಆರೋಪಿ ಬಂಧನ (ಚಿಕ್ಕಮಗಳೂರು ವರದಿ):  ಮೋಟಾರ್‌ಸೈಕಲ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ರೂ37,792 ಮೌಲ್ಯದ ಮದ್ಯವನ್ನು  ಅಬಕಾರಿ ಸಿಬ್ಬಂದಿ ನಗರದ ಬೈಪಾಸ್ ರಸ್ತೆಯ ನರಿಗುಡ್ಡನಹಳ್ಳಿಯ ವೃತ್ತದಲ್ಲಿಗುರುವಾರ ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಆರೋಪಿ ಇ.ಎನ್.ಲೋಕೇಶ್ ಎಂಬಾತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರೂ9.05 ಲಕ್ಷ ನಗದು ವಶ (ಬಳ್ಳಾರಿ ವರದಿ): ಬಳ್ಳಾರಿ ನಗರದ ಹೊಸಪೇಟೆ ರಸ್ತೆಯಲ್ಲಿರುವ ತನಿಖಾ ಠಾಣೆಯ ಸಿಬ್ಬಂದಿ ಗುರುವಾರ ತಪಾಸಣೆ ನಡೆಸಿ ರೂ. 9.05 ಲಕ್ಷ ನಗದು ಮತ್ತು ಬೈಕ್, ಕಾರ್ ವಶಪಸಿಡಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ.

ರೂ1 ಲಕ್ಷ ವಶ (ಬಾಗಲಕೋಟೆ ವರದಿ): ಬಾಗಲಕೋಟೆ ಜಿಲ್ಲೆಯ ಜಮಖಂಡಿಗೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಿಂದ ಕಾರಿನಲ್ಲಿ ಬರುತ್ತಿದ್ದ ಒಬ್ಬನಿಂದ ಲಕ್ಷ ರೂ. ವಶಪಡಿಸಿಕೊಂಡು ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

55 ಅಬ್ಕಾರಿ ಪ್ರಕರಣ ದಾಖಲು (ಹಾವೇರಿ ವರದಿ): ಹಾವೇರಿ ಜಿಲ್ಲೆಯಾದ್ಯಂತ 357 ಕಡೆಗಳಲ್ಲಿ ಅಬಕಾರಿ ದಾಳಿ ನಡೆದಿದ್ದು, 55 ಪ್ರಕರಣಗಳು ದಾಖಲಾಗಿವೆ.  ಒಟ್ಟು 46 ಜನ ಆರೋಪಿಗಳನ್ನು ಬಂಧಿಸಿ, ನಾಲ್ಕು ದ್ವಿಚಕ್ರ ವಾಹನ, ಒಂದು ಆಟೋ ಸೇರಿದಂತೆ ಸುಮಾರು ರೂ3,28,200 ಮೌಲ್ಯದ ವಸ್ತುಗಳನ್ನು ಮತ್ತು ಮದ್ಯ ವಶಪಡಿಸಿಕೊಳ್ಳಲಾಗಿದೆ

ಅಕ್ರಮ ಮದ್ಯ ಸಂಗ್ರಹ: ಶಿಕ್ಷಕ ಅಮಾನತು

ಬೀಳಗಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಮನೆಯಲ್ಲಿ ಮದ್ಯ ಸಂಗ್ರಹಿಸಿಟ್ಟಿದ್ದ ಆರೋಪದ ಮೇಲೆ ತಾಲ್ಲೂಕಿನ ಶಿಕ್ಷಕರೊಬ್ಬರನ್ನು ಡಿಡಿಪಿಐ ಅಮಾನತು ಮಾಡಿದ್ದಾರೆ.

ತಾಲ್ಲೂಕಿನ ಹೊನ್ನಿಹಾಳ ಗ್ರಾಮದ ಹತ್ತಿರದ ಕಟಗ್ಯಾನ ಮಡ್ಡಿ ಬಳಿ ಇರುವ ತೋಟದ ಮನೆಯಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿಟ್ಟಿರುವ ಖಚಿತ ಮಾಹಿತಿ ಆಧರಿಸಿ ಬುಧವಾರ ದಾಳಿ ಮಾಡಿದ ಜಾರಿ ಮತ್ತು ಲಾಟರಿ ನಿಷೇಧ ದಳ ಹಾಗೂ ಅಬಕಾರಿ ಇಲಾಖೆಯ ವಿಶೇಷ ತಂಡ ಮದ್ಯ ವಶಪಡಿಸಿಕೊಂಡು, ಮೂವರನ್ನು ಬಂಧಿಸಿತ್ತು. ಇದರಲ್ಲಿ ಗಿರಿಸಾಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಭೀಮಪ್ಪ ಶಿವಪ್ಪ ಲಮಾಣಿ ಕೂಡ ಸೇರಿದ್ದರು. ಅವರನ್ನು ಅಮಾನತು ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಜಿ. ದಾಸರ ತಿಳಿಸಿದ್ದಾರೆ.

ಎಲ್ಲಿ, ಎಷ್ಟು ಹಣ ವಶ
ಬೆಳಗಾವಿ ವಿಮಾನ ನಿಲ್ದಾಣ ರೂ10 ಲಕ್ಷ
ಬಳ್ಳಾರಿಯ ಕೌಲ್ ಬಜಾರ್ ರೂ 7 ಲಕ್ಷ
ಕೊಪ್ಪಳ ರೂ 10 ಲಕ್ಷ
ಕುಮಟಾ ರೂ 8.3 ಲಕ್ಷ
ದಾವಣಗೆ ರೂ 10.14 ಲಕ್ಷ
ಬಳ್ಳಾರಿ ಬಸ್ ನಿಲ್ದಾಣ ರೂ 9.95 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT