ರಾಯಚೂರು: ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲೊಂದಾದ ಇಲ್ಲಿಗೆ ಸಮೀಪದ ಸುಕ್ಷೇತ್ರ ದೇವಸುಗೂರಿನ ಶ್ರೀ ಸೂಗೂರೇಶ್ವರ ಜಾತ್ರಾ ಮಹೋತ್ಸವದ ಜೋಡು ರಥೋತ್ಸವ ಮಂಗಳವಾರ ಪ್ರತಿ ವರ್ಷದಂತೆ ಅಸಂಖ್ಯಾತ ಭಕ್ತರ ನಡುವೆ ನಡೆಯಿತು.
ಕರ್ನಾಟಕದ ವಿವಿಧ ಭಾಗಗಳಿಂದ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಬೇರೆ ಕಡೆಯಿಂದ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಸೂಗೂರೇಶ್ವರ ಜಾತ್ರಾ ಮಹೋತ್ಸವದ ವಿಶೇಷತೆ ಎಂದರೆ `ಜೋಡು ರಥೋತ್ಸವ'. ಈ ಜೋಡು ರಥೋತ್ಸವ ವೀಕ್ಷಣೆ ವಿಶೇಷತೆಯಾಗಿದ್ದು, ಭಕ್ತರು ಸಾಗರೋಪಾದಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಬಂದಿದ್ದರು.
ರಾಯಚೂರು ಜಿಲ್ಲೆ, ಯಾದಗಿರಿ ಸೇರಿದಂತೆ ವಿವಿಧ ಕಡೆಯಿಂದ ಈ ಜಾತ್ರಾ ಮಹೋತ್ಸವಕ್ಕೆ ಸಾರಿಗೆ ಸಂಸ್ಥೆಯು ವಿಶೇಷ ಬಸ್ ಸಂಚಾರ ವ್ಯವಸ್ಥೆ ಮಾಡಿದ್ದರೆ ಖಾಸಗಿ ವಾಹನಗಳ ಸಂಚಾರ ವ್ಯವಸ್ಥೆಯೂ ಹೆಚ್ಚಾಗಿತ್ತು.
ಜೋಡು ರಥೋತ್ಸವ ದಿನವಾದ ಮಂಗಳವಾರ ಮುಂಜಾನೆ ಕಲಶಾರೋಹಣ ಹಾಗೂ ಪೂಜೆ ನಡೆಯಿತು. ನಂತರ ಸುಗೂರೇಶ್ವರ ಸ್ವಾಮಿಗೆ ಮಹಾರುದ್ರಾಭಿಷೇಕ ಪೂಜೆ ನೆರವೇರಿಸಲಾಯಿತು. ಸಂಜೆ 5.30ಕ್ಕೆ ಶ್ರೀ ಸುಗೂರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರ ಸಾನಿಧ್ಯದಲ್ಲಿ ಜೋಡು ರಥೋತ್ಸವಕ್ಕೆ ಭಕ್ತ ಸಮೂಹ ಚಾಲನೆ ನೀಡಿತು. ಮಠಾಧೀಶರು, ಜನಪ್ರತಿನಿಧಿಗಳು, ಮುಖಂಡರು ಪಾಲ್ಗೊಂಡಿದ್ದರು.