ಬೆಂಗಳೂರು: ಪ್ರಸಕ್ತ ಸಾಲಿನ ರಾಜ್ಯಮಟ್ಟದ ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿಗೆ ವಿವೇಕ ಶಾನಭಾಗರನ್ನು ಅವರ ಸಾಹಿತ್ಯ ಕ್ಷೇತ್ರದಲ್ಲಿಯ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟೆಯವರಾದ ವಿವೇಕ ಶಾನಭಾಗ ಈವರೆಗೆ `ಅಂಕುರ~, `ಲಂಗರು~, `ಹುಲಿ ಸವಾರಿ~, `ಮತ್ತೊಬ್ಬನ ಸಂಸಾರ~ ಎಂಬ 4 ಕಥಾಸಂಗ್ರಹಗಳನ್ನು, `ಇನ್ನೂ ಒಂದು~, `ಒಂದು ಬದಿ ಕಡಲು~ ಕಾದಂಬರಿಗಳನ್ನು ಬರೆದಿದ್ದಾರೆ. ಅವರು `ದೇಶಕಾಲ~ ಎಂಬ ವಿಶಿಷ್ಟ ತ್ರೈಮಾಸಿಕವನ್ನು ಏಳು ವರ್ಷ ಕಾಲ ಸಂಪಾದಿಸಿದ್ದಾರೆ. ಪ್ರಶಸ್ತಿಯು ಐದು ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಬಿ.ಎಚ್.ಶ್ರೀಧರರ ಜನ್ಮದಿನವಾದ ಏಪ್ರಿಲ್ 24ರಂದು ಶಿರಸಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಟಿ.ನಾರಾಯಣ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.