ಹುಬ್ಬಳ್ಳಿ: `ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ವಿವೇಕಾನಂದ ಸಾರ್ಧಶತಿ ಸಮಾರೋಹ ಸಮಿತಿ ಆಶ್ರಯದಲ್ಲಿ ವರ್ಷಪೂರ್ತಿ ಪಂಚಮುಖಿ ಅಭಿಯಾನ ಹಮ್ಮಿಕೊಳ್ಳಲಾಗಿದೆ' ಎಂದು ವಿವೇಕಾನಂದ ಜನ್ಮ ವರ್ಷಾಚರಣೆ ಸಮಿತಿಯ ಸಹ ಪ್ರಾಂತ ಸಂಯೋಜಕ ಸುಧೀರ್ಸಿಂಗ್ ಘೋರ್ಪಡೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
`2013ರ ಜನವರಿ 12ರಂದು ವಿವೇಕಾನಂದರ ಜನ್ಮದಿನದಂದು ಎಲ್ಲಾ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಅಭಿಯಾನ ಆರಂಭಗೊಳ್ಳಲಿದ್ದು, ಜನವರಿ 12, 2014ರಂದು ಕೊನೆಗೊಳ್ಳಲಿದೆ. ಆಚರಣೆಯಲ್ಲಿ ವಿವೇಕಾನಂದರ ವಿಚಾರ ಧಾರೆಯುಳ್ಳ ಐದು ತತ್ವಗಳ ಮೂಲಕ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
`ದೇಶದಾದ್ಯಂತ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆಗಾಗಿ ಸಾರ್ಧಶತಿ ಸಮಾರೋಹ ಸಮಿತಿ ರಚಿಸಲಾಗಿದ್ದು, ಕರ್ನಾಟಕ ರಾಜ್ಯ ಘಟಕದ ಗೌರವ ಅಧ್ಯಕ್ಷರಾಗಿ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ, ಅಧ್ಯಕ್ಷರಾಗಿ ಡಾ. ಮೋಹನ ಆಳ್ವ ಅವರನ್ನು ನೇಮಿಸಲಾಗಿದೆ, ಉಪಾಧ್ಯಕ್ಷರಾಗಿ ವಿಶ್ರಾಂತ ಕುಲಪತಿ ಡಾ. ಕೆ. ಚಿದಾನಂದ ಗೌಡ, ವಿವೇಕಾನಂದ ಯೂತ್ ಮೂವ್ಮೆಂಟ್ ಸ್ಥಾಪಕ ಡಾ. ಬಾಲಸುಬ್ರಮಣ್ಯಂ, ರಾಜ್ಯ ಮಹಿಳಾ ವಿವಿ ಕುಲಪತಿ ಡಾ. ಮೀನಾ ಚಂದವರಕರ, ರಾಜ್ಯ ಕಾನೂನು ವಿವಿ ಕುಲಪತಿ ಡಾ. ಜೆ.ಎಸ್. ಪಾಟೀಲ ಅವರನ್ನು ನೇಮಿಸಲಾಗಿದೆ' ಎಂದು ಹೇಳಿದರು.