ಮಂಡ್ಯ: ಆಶಾವಾದ, ನಿರ್ಭಯತೆ, ಸಾಮಾಜಿಕ ಸಮಸ್ಯೆಗಳ ಬಗೆಗೆ ವಿಶಾಲ ದೃಷ್ಟಿಯ ಸಂಕೇತದಂತೆ ಇರುವ ಸ್ವಾಮಿ ವಿವೇಕಾನಂದ ಅವರ ಚಿಂತನೆಗಳನ್ನು ಪ್ರಚಾರಪಡಿಸಲು ರಾಷ್ಟ್ರೋತ್ಥಾನ ಬಳಗವು ಭಾನುವಾರ ಮಂಡ್ಯ ನಗರದಿಂದ ಸಿದ್ದಯ್ಯನಕೊಪ್ಪಲು ಗ್ರಾಮದವರೆಗೆ ಬೈಸಿಕಲ್ ಜಾಥಾ ಏರ್ಪಡಿಸಿತ್ತು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ ಅವರು, ನಗರದಲ್ಲಿನ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕೇಸರಿ ಬಾವುಟ ಬೀಸುವ ಮೂಲಕ ಜಾಥಾಗೆ ವಿಧು್ಯಕ್ತ ಚಾಲನೆ ನೀಡಿದರು.
‘ಎಲ್ಲರನ್ನೂ ಸಮನಾಗಿ ಪ್ರೀತಿಸಿ, ಗೌರವಿಸಿ.., ಮಾಡಿದ ಕೆಲಸಕ್ಕೆ ಪ್ರತಿಯಾಗಿ ಏನನ್ನೂ ಬಯಸಬೇಡಿ.., ವಂದೇ ಮಾತರಂ.. ಎನ್ನುವುದು ಸೇರಿದಂತೆ ವಿವೇಕನಂದರ ಸಂದೇಶಗಳ ಹಲವು ಫ್ಲಕ್ಸ್ ಕಾರ್ಡ್ಗಳನ್ನು ಬೈಸಿಕಲ್ಗಳಿಗೆ ಹಾಕಿಕೊಂಡು ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಜಾಥಾ ನಡೆಸಿದರು.
ಮಂಡ್ಯದ ವಿವಿ ರಸ್ತೆ, ಹೊಸಹಳ್ಳಿ ವೃತ್ತ, ನೂರಡಿ ರಸ್ತೆ, ಬನ್ನೂರು ರಸ್ತೆ, ಮರೀಗೌಡ ಬಡಾವಣೆ ರಸ್ತೆ, ಎಪಿಎಂಸಿ ಯಾರ್ಡ್ ಮುಖ್ಯ ರಸ್ತೆ, ಕಲ್ಲಹಳ್ಳಿ ಮಾರ್ಗವಾಗಿ ಸಿದ್ದಯ್ಯನಕೊಪ್ಪಲು ಗ್ರಾಮದ ವರೆಗೆ ಸುಮಾರು ಆರು ಕಿ.ಮೀ. ದೂರವನ್ನು ಬೈಸಿಕಲ್ನಲ್ಲಿ ಕ್ರಮಿಸಿದರು. ದಾರಿಯುದ್ದಕ್ಕೂ ‘ವಿವೇಕವಾಣಿ’ಯನ್ನು ಸಾರುವ ಮೂಲಕ ಸಾರ್ವನಿಕರ ಗಮನ ಸೆಳೆಯುವ ಪ್ರಯತ್ನ ನಡೆಸಿದರು.
ಸಿದ್ದಯ್ಯನಕೊಪ್ಪಲು ಗ್ರಾಮದಲ್ಲಿ ವಿವೇಕಾನಂದ ಅವರ ಅನುಯಾಯಿ ಚಕ್ರವರ್ತಿ ತಿರುಮಗನ್ ಅವರು ಯುವಜನರ ಜೊತೆ ಸಂವಾದ ನಡೆಸಿದರು. ರಾಷ್ಟ್ರೋತ್ಥಾನ ಬಳಗದ ಸಂಚಾಲಕ ಎಚ್.ಎನ್.ರಮೇಶ್, ಮಾಂಡವ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದೊಡ್ಡಾಚಾರ್ ಸೇರಿದಂತೆ ಹಲವರು ಹಾಜರಿದ್ದರು.