ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕಾನಂದರ ಬಗ್ಗೆ... ಗ್ರಹಿಕೆಗೆ ಪೂರಕವಾಗಿ...

Last Updated 18 ಜನವರಿ 2012, 19:30 IST
ಅಕ್ಷರ ಗಾತ್ರ

ಕಳೆದ ಸೋಮವಾರದ (ಜ.16) ಸ್ವಾಮಿ ವಿವೇಕಾನಂದರ ಕುರಿತ ನನ್ನ ಅಂಕಣಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಹಳ ಮಂದಿ ಅದನ್ನು ಮೆಚ್ಚಿಕೊಂಡಿದ್ದಾರೆ, ಕೆಲವರು ಅದನ್ನು ವಿರೋಧಿಸಿದ್ದಾರೆ. ವಿರೋಧಿಸುವವರು ಅಂಕಣದಲ್ಲಿ ವ್ಯಕ್ತಪಡಿಸಿದ ವಿಚಾರಗಳನ್ನು ಮತ್ತು ಅದರ ಒಟ್ಟು ಆಶಯವನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗಿಲ್ಲವೇನೋ ಎಂಬ ಅನುಮಾನ ನನಗೆ.
 
ಸಂವಹನ ಸಾಮರ್ಥ್ಯ ಒಬ್ಬ ಪತ್ರಕರ್ತನ ದೊಡ್ಡ ಶಕ್ತಿ. ಇದರ ಮೂಲಕವೇ ಆತ ಓದುಗನ ಜತೆ ಸಂಬಂಧ ಸ್ಥಾಪನೆಗೆ ಪ್ರಯತ್ನ ಮಾಡಬೇಕಾಗುತ್ತದೆ. ಸಂವಹನದ ಸೇತುವೆ ಮುರಿದುಬಿದ್ದರೆ ಪತ್ರಕರ್ತ ಮತ್ತು ಓದುಗರಿಬ್ಬರೂ ಪರಸ್ಪರ ಸಂಧಿಸಲಾಗದೆ ಇದ್ದಲ್ಲಿಯೇ ಉಳಿದುಬಿಡುತ್ತಾರೆ.
 
ಪೂರ್ವಗ್ರಹ ಇಲ್ಲದ ಮುಕ್ತ ಮನಸ್ಸಿನ ಮೂಲಕ ಮಾತ್ರ ಸಂವಹನದ ಸೇತುವೆಯನ್ನು ಗಟ್ಟಿಗೊಳಿಸಲು ಸಾಧ್ಯ. ಈ ಉದ್ದೇಶದಿಂದ ಕೆಲವು ವಿವರಣೆಗಳನ್ನು ನೀಡಬಯಸುತ್ತೇನೆ. ಇದು ನನ್ನ ಬರವಣಿಗೆಯನ್ನು ಸರಿಯಾದ ರೀತಿಯಲ್ಲಿ ಗ್ರಹಿಸಲು ನೆರವಾಗಬಹುದೆಂಬ ಆಶಯ ನನ್ನದು.

ಯಾವುದೇ ವ್ಯಕ್ತಿಯ ಬಗ್ಗೆ ದುರುದ್ದೇಶ ಇರಬೇಕಾದರೆ ಕನಿಷ್ಠ ಭಿನ್ನಾಭಿಪ್ರಾಯಗಳಾದರೂ ಇರಬೇಕು.ನನ್ನ ಓದಿನ ಮಿತಿಯಲ್ಲಿಯೂ ನನಗೆ ಗಾಂಧೀಜಿ ಮತ್ತು ಅಂಬೇಡ್ಕರ್ ಬಗ್ಗೆ ಭಿನ್ನಾಭಿಪ್ರಾಯಗಳಿವೆ, ಆದರೆ ವಿವೇಕಾನಂದರು ಹೇಳಿರುವ ಯಾವ ವಿಚಾರದ ಬಗ್ಗೆಯೂ ಲವಲೇಶದಷ್ಟೂ ಭಿನ್ನಾಭಿಪ್ರಾಯ ಇಲ್ಲ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬಯಸುತ್ತೇನೆ.
 
ಆದರೆ ವಿವೇಕಾನಂದರನ್ನು ಸರಿಯಾಗಿ ಓದಿದ ಯಾರಿಗೂ ಅವರು ಹಿಂದೂ ಧರ್ಮದ ಸುಧಾರಣೆಗಾಗಿ ಹೇಳಿರುವ ವಿಚಾರಗಳು ಅವರ ಸಾವಿನ 110 ವರ್ಷಗಳ ನಂತರವೂ ಅನುಷ್ಠಾನಕ್ಕೆ ಬಂದಿಲ್ಲ ಎನ್ನುವ ನೋವು ಕಾಡದೆ ಇರದು.
 
ಬಹುಶಃ ಅವರು ಬಯಸಿದ ರೀತಿಯಲ್ಲಿ ಸುಧಾರಣೆಯಾಗಿದ್ದರೆ ಹಿಂದೂ ಧರ್ಮ ಭಾರತ-ನೇಪಾಳಕ್ಕಷ್ಟೇ ಸೀಮಿತಗೊಳ್ಳದೆ ಜಗತ್ತಿನಾದ್ಯಂತ ಹರಡುತ್ತಿತ್ತು. ಆ ಪ್ರಯತ್ನವನ್ನೇ ಅವರು ಮಾಡಿದ್ದಲ್ಲವೇ?

 ಇದರಲ್ಲಿ ಮುಖ್ಯವಾಗಿ ನಾನು ಬಳಸಿದ ಕೆಲವು ಶಬ್ದಗಳ ಬಗ್ಗೆ ಕೆಲವರು ಆಕ್ಷೇಪ ಎತ್ತಿದ್ದಾರೆ. ಉದಾಹರಣೆಗೆ ಅವರನ್ನು `ದಡ್ಡ ವಿದ್ಯಾರ್ಥಿ~ ಎಂದು ಕರೆದದ್ದು ಸರಿಯೇ ಎನ್ನುವುದು ಕೆಲವರ ಪ್ರಶ್ನೆ. `ದಡ್ಡ~ ಎನ್ನುವ ಶಬ್ದ ಮಾನಹಾನಿಕರ ಅಲ್ಲವೇ ಅಲ್ಲ.
 
ಆದರೆ ವಿವೇಕಾನಂದರನ್ನು ಆ ಅರ್ಥದಲ್ಲಿಯೂ ದಡ್ಡ ಎಂದು ಹೇಳಿದುದಲ್ಲ. ಅವರಿಗೆ ಕಡಿಮೆ ಅಂಕಗಳು ಬಂದಿರುವುದು ನಮ್ಮ ಶಿಕ್ಷಣದ ವ್ಯವಸ್ಥೆಯಲ್ಲಿನ ದೋಷವನ್ನು ತೋರಿಸುತ್ತದೆಯೇ ಹೊರತು ಅವರ ಅಸಾಮರ್ಥ್ಯವನ್ನಲ್ಲ. ನಿಜವಾದ ಬುದ್ಧಿವಂತರನ್ನು ಗುರುತಿಸಲು ಸಾಧ್ಯವಾಗದ ಅಂದಿನ ವ್ಯವಸ್ಥೆ ಇನ್ನೂ ಬದಲಾಗಿಲ್ಲ.

ಈಗಲೂ ಬಾಯಿಪಾಠ ಮಾಡಿಸಿ ಪರೀಕ್ಷೆಗಳಲ್ಲಿ ಅಂಕ ಗಳಿಸಲಷ್ಟೇ ನೆರವಾಗುವ ಮಟ್ಟದಲ್ಲಿ ಅದು ಉಳಿದುಕೊಂಡುಬಿಟ್ಟಿದೆ ಎನ್ನುವುದನ್ನು ಹೇಳುವುದಷ್ಟೇ ನನ್ನ ಉದ್ದೇಶವಾಗಿತ್ತು.
ಅವರನ್ನು ಶಿಕ್ಷಕ ವೃತ್ತಿಯಿಂದ ವಜಾಗೊಳಿಸಿದ್ದನ್ನು ಹೇಳಿರುವ ಬಗ್ಗೆ ಕೆಲವರ ತಕರಾರುಗಳಿವೆ.
 
ಆ ಪ್ರಕರಣವನ್ನು ನಾನು ಇನ್ನಷ್ಟು ವಿವರಿಸಬೇಕಾಗಿತ್ತೋ ಏನೋ? ಈಶ್ವರಚಂದ್ರ ವಿದ್ಯಾಸಾಗರ ಅವರು ವಿವೇಕಾನಂದರನ್ನು ಕೆಲಸದಿಂದ ಕಿತ್ತುಹಾಕಲು ಕಾರಣ ಅವರ ಅಳಿಯ. ಆತ ಶಿಕ್ಷಣ ವ್ಯವಸ್ಥೆಯ ಆಡಳಿತ ಸೂತ್ರ ಕೈಗೆತ್ತಿಕೊಂಡ ನಂತರ ವಿವೇಕಾನಂದರ ಪ್ರತಿಭೆಯ ಬಗ್ಗೆ ಅಸೂಯೆಪಟ್ಟು ಚಾಡಿ ಹೇಳಿ ಮಾವನ ತಲೆ ಕೆಡಿಸುತ್ತಾನೆ.
 
ಈಶ್ವರಚಂದ್ರ ವಿದ್ಯಾಸಾಗರರಂತಹ ವ್ಯಕ್ತಿ ಕೂಡಾ ದೂರನ್ನು ಪರಾಮರ್ಶಿಸಲು ಹೋಗುವುದಿಲ್ಲ. ನಮ್ಮ ಈಗಿನ ಶಿಕ್ಷಣ ಸಂಸ್ಥೆಗಳು ಇದಕ್ಕಿಂತ ಏನಾದರೂ ಭಿನ್ನವಾಗಿವೆಯೇ? ಪ್ರತಿಭಾವಂತ ಶಿಕ್ಷಕನಿಗೆ ಮಾನ್ಯತೆ ಸಿಗುತ್ತಿದೆಯೇ? ಒಂದು ಸಣ್ಣಶಾಲೆಯಲ್ಲಿ ಪಾಠ ಹೇಳಲು `ಅಸಮರ್ಥ~ನಾದ ವ್ಯಕ್ತಿ ಮುಂದೊಂದು ದಿನ ಇಡೀ ಜಗತ್ತಿಗೆ ಪಾಠಹೇಳುತ್ತಾರೆ. 

ನರೇಂದ್ರನಾಥರೇನೋ ಕೀಳರಿಮೆಯಿಂದ ಬಳಲದೆ ಇನ್ನಷ್ಟು ಎತ್ತರಕ್ಕೆ ಬೆಳೆದುಬಿಟ್ಟರು. ಆದರೆ ಇದೇ ವ್ಯವಸ್ಥೆಯೊಳಗೆ ಸಿಕ್ಕಿ ಎಷ್ಟೋ ಪ್ರತಿಭೆಗಳು ಕಮರಿಹೋಗಿವೆಯೋ ಏನೋ? ಅಂತಹವರಿಗೆ ವಿವೇಕಾನಂದರ ಸಾಧನೆ ಸ್ಫೂರ್ತಿಯಾಗಬೇಕು.

ಅವರನ್ನು `ತಿಂಡಿಪೋತ~ ಎಂದು ಕರೆದದ್ದು ಸರಿಯೇ ಎನ್ನುವುದು ಕೆಲವರ ಪ್ರಶ್ನೆ. ನನಗೆ ಅನೇಕ ಬಂಗಾಳಿ ಮಿತ್ರರಿದ್ದಾರೆ. ಅವರನ್ನು ಹತ್ತಿರದಿಂದ ಕಂಡಿದ್ದೇನೆ. ಬಂಗಾಳಿಗಳು ನಿಜಕ್ಕೂ ತಿಂಡಿಪೋತರು. ಹಾಗೆಂದು ಕರೆದರೆ ಅವರು ಹೆಮ್ಮೆಪಡುತ್ತಾರೆ. ಸ್ವತಃ ರಾಮಕೃಷ್ಣ ಪರಮಹಂಸರು ತಿಂಡಿಯನ್ನು ಬಹಳ ಇಷ್ಟಪಡುತ್ತಿದ್ದರು.
 
ಬಂಗಾಳಿ ಭಕ್ತರು ಬರಿಗೈಯಲ್ಲಿ ಬಂದರೆ `ಬಂಗಾಳಿಯಾಗಿ ನೀನು ಸಿಹಿತಿಂಡಿ ಇಲ್ಲದೆ ಬಂದಿದ್ದಿಯಲ್ಲಾ~ ಎಂದು ಹುಸಿಮುನಿಸು ತೋರಿದ್ದುಂಟು. ನಮ್ಮ ಯುವಕರು ತಿಂದುಂಡು ಆರೋಗ್ಯವಂತರಾಗಿ ಬೆಳೆದರೆ ಮಾತ್ರ ಬಲಿಷ್ಠ ಭಾರತ ನಿರ್ಮಾಣ ಮಾಡಲು ಸಾಧ್ಯ ಎಂದು ವಿವೇಕಾನಂದರು ಹೇಳುತ್ತಿದ್ದರು.

ಅವರನ್ನು `ರೋಗಿ~ ಎಂದು ಕರೆದದ್ದು ಸರಿಯೇ ಎಂದು ಕೆಲವರು ದುಃಖದಿಂದ ಪ್ರಶ್ನಿಸಿದ್ದಾರೆ. ರೋಗ ಎನ್ನುವುದು ಅಪರಾಧ ಇಲ್ಲವೇ ಪಾಪ ಅಲ್ಲ. ವಿವೇಕಾನಂದರು ರೋಗಿಯಾಗಿದ್ದು ದುರ್ವ್ಯಸನಗಳಿಂದಲ್ಲ. ಅದು ಸ್ವಲ್ಪಮಟ್ಟಿಗೆ ವಂಶವಾಹಿಯಾಗಿ ಬಂದದ್ದು, ಅವರ ತಂದೆ ಕೂಡಾ 52ನೇ ವಯಸ್ಸಿಗೆ ನಿಧನರಾಗಿದ್ದರು.
 
ಜತೆಗೆ ಜೀವನದಲ್ಲಿ ಅನುಭವಿಸಿದ ಬಡತನ, ಹಸಿವು ಮೊದಲಾದ ಕಷ್ಟಗಳು ಅವರ ದೈಹಿಕ ಆರೋಗ್ಯವನ್ನು ಕೆಡಿಸಿತ್ತು. ಒಂದು ಸಣ್ಣ ತಲೆನೋವು ಬಂದರೆ ಒದ್ದಾಡುವ, ವೈಫಲ್ಯಗಳಿಗೆ ಅನಾರೋಗ್ಯದ ಸಬೂಬು ನೀಡಿ ತಪ್ಪಿಸಿಕೊಳ್ಳುವ ನಮ್ಮಂತಹವರಿಗೆ ವಿವೇಕಾನಂದರು ತಮ್ಮ ಅನಾರೋಗ್ಯವನ್ನು ಮೀರಿ ಮಾಡಿದ ಸಾಧನೆ ಸ್ಫೂರ್ತಿಯಲ್ಲವೇ? ಅವರು ವಿಶ್ವದ ಆಧ್ಯಾತ್ಮಿಕ ಕ್ಷೇತ್ರವನ್ನು ಗೆದ್ದದ್ದು ದೈಹಿಕ ಬಲದಿಂದ ಅಲ್ಲ, ಆತ್ಮಬಲದಿಂದ. ಇದು ವಿವೇಕಾನಂದರ ಜೀವನದಿಂದ ಕಲಿಯಬೇಕಾದ ಪಾಠ.

ಹೌದು, ಕೆಲವು ಶಬ್ದಗಳನ್ನು ಇನ್ನಷ್ಟು ಮೆದುಗೊಳಿಸಬಹುದಿತ್ತು.. ದಡ್ಡ ಎನ್ನುವ ಬದಲು `ಬುದ್ಧಿವಂತನಲ್ಲದ~ `ಹೆಚ್ಚು ಅಂಕ ಗಳಿಸಲಾಗದ~ ಎಂದು, `ತಿಂಡಿಪೋತ~ ಎನ್ನುವ ಬದಲಿಗೆ `ತಿಂಡಿಯನ್ನು ಇಷ್ಟಪಡುವ~ ಎಂದು ಹೇಳಬಹುದಿತ್ತೋ ಏನೋ? ಇಂಗ್ಲಿಷಿನ `ಚೆಯಿನ್ ಸ್ಮೋಕರ್~ ಎನ್ನುವುದಕ್ಕೆ ಕನ್ನಡದಲ್ಲಿ ಏನು ಹೇಳುವುದೆಂದು ಗೊತ್ತಾಗದೆ `ವ್ಯಸನಿ~ ಎಂದು ಬರೆದೆ.
 
ಅದನ್ನು ತಪ್ಪಿಸಬಹುದಿತ್ತು. ಕೆಲವು ವಿಷಯಗಳನ್ನು ಇನ್ನಷ್ಟು ವಿಸ್ತರಿಸಿ ಬರೆಯಬಹುದಿತ್ತು. ಉದಾಹರಣೆಗೆ ಅಮೆರಿಕದಲ್ಲಿ ರಾತ್ರಿ ಔತಣಕೂಟಕ್ಕೆ ಹೋಗಿದ್ದರೂ ಅವರು ಅಲ್ಲಿ ಕುಡಿದು-ಕುಣಿದು ಕುಪ್ಪಳಿಸುವ ಮೋಜು ಮಾಡಿಲ್ಲ. ಆ ಔತಣಗಳ ಕರೆಗಳಿಂದ ತಪ್ಪಿಸಲಿಕ್ಕಾಗಿ ಅವರು ವಿದೇಶಕ್ಕೆ ಹೋದ ಬಹಳಷ್ಟು ಸಂದರ್ಭಗಳಲ್ಲಿ ಸಸ್ಯಾಹಾರಿಯಾಗಿ ಬಿಡುತ್ತಿದ್ದರು. 

ಈ ಬರವಣಿಗೆಗೆ ಆಧಾರವಾಗಿ ಸಿಕ್ಕಿದ್ದು ಮುಖ್ಯವಾಗಿ ಮಣಿ ಸಂಕರ್ ಮುಖರ್ಜಿ ಅವರ `ದಿ ಮಾಂಕ್ ಆ್ಯಸ್ ಮ್ಯಾನ್~ ಪುಸ್ತಕ. ನನ್ನ ಬಂಗಾಳಿ ಮಿತ್ರರು ಕೆಲವು ವರ್ಷಗಳ ಹಿಂದೆಯೇ ಈ ಪುಸ್ತಕದ ಬಗ್ಗೆ ನನಗೆ ಹೇಳಿದ್ದರೂ ಭಾಷಾ ಸಮಸ್ಯೆಯಿಂದಾಗಿ ಓದಲಾಗಿರಲಿಲ್ಲ. ಕಳೆದ ವರ್ಷ ಇಂಗ್ಲಿಷ್‌ನಲ್ಲಿ ಪ್ರಕಟವಾಗಿದ್ದನ್ನು ಕೇಳಿ ತಂದು ಓದಿದೆ. 

ವಿವೇಕಾನಂದರ `ಸಮಗ್ರ ಕೃತಿ ಸಂಗ್ರಹ~, ಮೇರಿ ಲೂಯಿಸ್ ಬರ್ಕ್ ಅವರ `ವಿವೇಕಾನಂದ ಇನ್ ದಿ ವೆಸ್ಟ್: ನ್ಯೂ ಡಿಸ್ಕವರಿ~,  ಸ್ವಾಮಿ ವಿವೇಕಾನಂದ ಅವರ ಸೋದರ ಮಹೇಂದ್ರನಾಥ ದತ್ತಾ ಬರೆದಿರುವ ಸುಮಾರು 90 ಪುಸ್ತಕಗಳು, ಇನ್ನೊಬ್ಬ ಸೋದರ ಡಾ. ಭೂಪೇಂದ್ರನಾಥ ದತ್ತಾ ಬರೆದಿರುವ ಪುಸ್ತಕ, ಸೋದರಿ ನಿವೇದಿತಾ ಅವರ ಲೇಖನಗಳು-ಹೀಗೆ ನೂರಾರು ಪುಸ್ತಕಗಳನ್ನು ಓದಿ ಬರೆದ ಪುಸ್ತಕ ಅದು. ಅದನ್ನು ಆಧರಿಸಿಯೇ ಬರೆದೆ.

ಸ್ವಾಮಿ ವಿವೇಕಾನಂದರು ಇಡೀ ವಿಶ್ವದ ಅಭಿಮಾನ-ಗೌರವಕ್ಕೆ ಪಾತ್ರವಾದ ಅಧ್ಯಾತ್ಮ ಚೇತನ. ಅದನ್ನು ಯಾರೂ ಅಲ್ಲಗಳೆಯುವುದು ಸಾಧ್ಯ ಇಲ್ಲ. ಅವರನ್ನು ಇನ್ನಷ್ಟು ಅರಿಯುವ ಪ್ರಯತ್ನದಿಂದ ಅವರ ಬಗೆಗಿನ ಅಭಿಮಾನ-ಗೌರವ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗಲಾರದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT