ಬೆಂಗಳೂರು: `ಯಾರೋ ತೊಡಿಸಿದ ಖಾವಿಗೂ ತಾವೇ ತೊಡುವ ಖಾವಿಗೂ ಬಹಳ ವ್ಯತ್ಯಾಸವಿದೆ. ರಮಣ ಮಹರ್ಷಿ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರು ತಾವಾಗಿ ಖಾವಿ ತೊಟ್ಟವರು. ಪೇಜಾವರ ಶ್ರೀಗಳಿಗೆ ಬೇರೆಯವರು ಖಾವಿ ತೊಡಿಸಿದ್ದು~ ಎಂದು ಲೇಖಕ ಪ್ರೊ.ಜಿ.ಕೆ.ಗೋವಿಂದರಾವ್ ಮಾರ್ಮಿಕವಾಗಿ ಹೇಳಿದರು.
`ಪಠ್ಯದಲ್ಲಿ ಕೇಸರೀಕರಣ; ಸಂವಿಧಾನ ವಿರೋಧಿ ಹಗರಣ- ಒಂದು ಚರ್ಚೆ~ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ವಿವೇಕಾನಂದರ ಸನ್ಯಾಸತ್ವದಲ್ಲಿ ಮಾನವೀಯತೆ ಇತ್ತು~ ಎಂದರು.
`ತಾನು ಸನ್ಯಾಸಿಯಾಗಿ ತಾಯಿಯನ್ನು ಕಡೆಗಣಿಸಿದೆನೆಂಬ ಅಳುಕು ವಿವೇಕಾನಂದರನ್ನು ಕಾಡುತ್ತಿತ್ತು. ಅದಕ್ಕಾಗಿ ಅವರು ಎರಡು ವರ್ಷಗಳ ಕಾಲ ತಮ್ಮ ತಾಯಿಯನ್ನು ದೇಶದ ಯಾತ್ರಾ ಸ್ಥಳಗಳಿಗೆ ಕರೆದೊಯ್ದರು~ ಎಂದು ಅವರು ತಿಳಿಸಿದರು.
`ಮಕ್ಕಳಿಗೆ ತಾಯಿ ಮೂಲಕ ದೇಶಭಕ್ತಿ ಬರಬೇಕೆ ಹೊರತು ದೇಶಭಕ್ತಿ ಮೂಲಕ ತಾಯಿ ಪ್ರೀತಿ ಬರಬಾರದು. ವಿವೇಕಾನಂದರು ತಮ್ಮ ಮಾತೃ ಪ್ರೇಮದ ಮೂಲಕ ರಾಷ್ಟ್ರ ಪ್ರೇಮದ ಸಂದೇಶ ನೀಡಿದರು. ಇದಕ್ಕೆ ವಿರುದ್ಧವಾದ ಸಿದ್ಧಾಂತವನ್ನು ಆರ್ಎಸ್ಎಸ್ ಪ್ರತಿಪಾದಿಸುತ್ತಿದೆ~ ಎಂದು ಅವರು ಅಭಿಪ್ರಾಯಪಟ್ಟರು.
`ಭಗವದ್ಗೀತೆ, ಸಂಸ್ಕೃತ, ಹಿಂದುತ್ವ- ಇವೆಲ್ಲವೂ ಒಂದಕ್ಕೊಂದು ಅಂತರ್ ಸಂಬಂಧ ಇರುವ ಸಂಘ ಪರಿವಾರದ ಕಾರ್ಯಸೂಚಿಗಳು. ಕನ್ನಡದ ಮಕ್ಕಳಿಗೆ ಬಸವಣ್ಣನ ವಚನಗಳನ್ನು ಕಲಿಸಬೇಕೆ ಹೊರತು ಭಗವದ್ಗೀತೆಯನ್ನಲ್ಲ. ಶಾಲಾ ಪಠ್ಯಗಳಲ್ಲಿ ಅಲ್ಪಸಂಖ್ಯಾತರ ಬಗ್ಗೆ ಕೆಟ್ಟ ಚಿತ್ರಣ ನೀಡಿರುವುದು ಮತ್ತು ವಾಸ್ತವಾಂಶಗಳನ್ನು ಕೊಡದಿರುವ ಬಗ್ಗೆ ಪರಿಶೀಲಿಸಲು ಸಮಿತಿಯನ್ನು ರಚಿಸಲಾಗಿತ್ತು. ಜಿ.ರಾಮಕೃಷ್ಣ, ಮುಮ್ತಾಜ್ ಅಲಿ ಖಾನ್ ಮೊದಲಾದವರನ್ನು ಒಳಗೊಂಡ ಸಮಿತಿಯು ನೀಡಿದ ವರದಿಯನ್ನು ಬಿಜೆಪಿ ಸರ್ಕಾರ ನಿರ್ಲಕ್ಷಿಸಿದೆ~ ಎಂದು ಅವರು ಆರೋಪಿಸಿದರು.