ಮಂಗಳೂರು: ‘ವಿಶೇಷ ಸಾಮರ್ಥ್ಯವುಳ್ಳ ಮಕ್ಕಳು ಶಾಪವಲ್ಲ. ಅವರು ದೇವರು ಕೊಟ್ಟ ವರ. ಅವರಿಗೆ ತಂದೆ ತಾಯಿಗಳು ಪ್ರೀತಿ ತೋರಿಸಿದರೆ ಆ ಮಕ್ಕಳು ನಿಮ್ಮನ್ನು ಹೆಚ್ಚಾಗಿ ಪ್ರೀತಿಸುತ್ತಾರೆ’ ಎಂದು ಮಾಹೆಯ ವಿಶ್ರಾಂತ ಕುಲಪತಿ ಪ್ರೊ.ಬಿ.ಎಂ.ಹೆಗ್ಡೆ ಅಭಿಪ್ರಾಯಪಟ್ಟರು.
ಸೇಂಟ್ ಆಗ್ನೆಸ್ ವಿಶೇಷ ಶಾಲೆಯಲ್ಲಿ ಗುರುವಾರ ನಡೆದ ಶಾಲಾ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿಶೇಷ ಮಕ್ಕಳ ಬಗ್ಗೆ ತಾತ್ಸಾರ ಮನೋಭಾವ ಬೇಡ. ಅವರು ಹುಟ್ಟಿದ್ದು ನಮ್ಮ ಪುಣ್ಯ ಎಂದು ಭಾವಿಸಬೇಕು. ಮನುಷ್ಯ ಬದುಕುವುದು ಪ್ರೀತಿಯಿಂದ. ಆ ಮಕ್ಕಳನ್ನು ಹೆಚ್ಚು ಪ್ರೀತಿಸಬೇಕು. ಮಕ್ಕಳನ್ನು ತರಬೇತುಗೊಳಿಸುವುದು ಪುಣ್ಯದ ಕೆಲಸ ಎಂದರು.
ವಿಶೇಷ ಸಾಮರ್ಥ್ಯವುಳ್ಳ ಮಕ್ಕಳು ಹುಟ್ಟಿರುವುದಕ್ಕೆ ಕೆಲವು ತಂದೆ ತಾಯಂದಿರು ನಮ್ಮ ತಪ್ಪು ಎಂದು ಭಾವಿಸುತ್ತಾರೆ. ಆದರೆ ಅದು ಅವರ ತಪ್ಪಲ್ಲ. ಪರಿಸರದಿಂದ ಕೆಲವು ಮಕ್ಕಳು ಆ ರೀತಿ ಹುಟ್ಟುತ್ತಾರೆ. ಅದು ನ್ಯೂನತೆ ಎಂದುಕೊಂಡರೆ ತಪ್ಪು. ಹುಟ್ಟುವ ಪ್ರತಿಯೊಂದು ಮಕ್ಕಳೂ ಜೀನಿಯಸ್. ಈ ಮಕ್ಕಳಲ್ಲಿ ಹುರುಪಿದ್ದು ಅವರನ್ನು ತರಬೇತುಗೊಳಿಸಿದರೆ ಚುರುಕುಗೊಳ್ಳುತ್ತಾರೆ ಎಂದರು.
ಭಿನ್ನ ಸಾಮರ್ಥ್ಯವುಳ್ಳ ಮಕ್ಕಳನ್ನು ತರಬೇತುಗೊಳಿಸುವುದು ಕಷ್ಟದ ಕೆಲಸ. ದೇವರು ಮಾಡುವ ಕೆಲಸವನ್ನು ನಮ್ಮ ಸಿಸ್ಟರ್ಗಳು ಮಾಡುತ್ತಿದ್ದಾರೆ. ವಿಶೇಷ ಶಾಲೆಗಳು ಇನ್ನಷ್ಟು ಬೆಳೆಯಬೇಕು ಎಂದರು. ಶಾಲೆಯ ಸಂಸ್ಥಾಪಕ ಪ್ರಾಂಶುಪಾಲರಾದ ಸಿಸ್ಟರ್ ಮರಿಯಾ ಜ್ಯೋತಿ, ಶಾಲೆಯ ಜಂಟಿ ಕಾರ್ಯದರ್ಶಿ ಸಿಸ್ಟರ್ ಎಂ.ಒಲಿವಿಯಾ, ಪ್ರಾಂಶುಪಾಲರಾದ ಸಿಸ್ಟರ್ ಶ್ರುತಿ ಎ.ಸಿ. ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ:
ಸಮಾರಂಭಕ್ಕೂ ಮುನ್ನ ಶಾಲೆಯ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮನ ಸೆಳೆಯಿತು. ಆರಂಭದಲ್ಲಿ ಪ್ರಾರ್ಥನೆ ಗೀತೆ, ನಂತರ ಶಾಲೆಯ ವಿದ್ಯಾರ್ಥಿನಿ ತುಳಸಿಯ ಭರತನಾಟ್ಯ ಎಲ್ಲರ ಮನ ಸೆಳೆಯಿತು. ನಂತರ ಮೇರಿ ದೇಶ್ಕಿ ಧರ್ತಿ, ‘ದೇಶ್ ಮೇ ರಂಗೀಲಾ’ ಹಾಡುಗಳ ಮೂಲಕ ಭಾರತ ದರ್ಶನವನ್ನು ಈ ಮಕ್ಕಳು ಮಾಡಿಸಿದರು.