ವಿರಾಜಪೇಟೆ: ಏಡ್ಸ್್ ಎಂಬುದು ಮಾರಕ–ಮಾರಣಾಂತಿಕ ಕಾಯಿಲೆ ಎಂದು ತಿಳಿದಿದ್ದರೂ ಜನಜಾಗೃತಿಯ ಕೊರತೆಯಿಂದ ಇದಕ್ಕೆ ಬಲಿಯಾಗುವವರ ಸಂಖ್ಯೆ ಅಧಿಕವಾಗುತ್ತಿದೆ ಎಂದು ವಿರಾಜಪೇಟೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಎನ್.ಕೆ. ಜ್ಯೋತಿ ಹೇಳಿದರು.
ವಿರಾಜಪೇಟೆಯ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ, ರಾಜ್ಯ ಏಡ್ಸ್ ಪ್ರಿವೆಂಶನ್ ಸೊಸೈಟಿ ಹಾಗೂ ರೆಡ್ ರಿಬ್ಬನ್ ಕ್ಲಬ್ನ ಆಶ್ರಯದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗಾಗಿ ಈಚೆಗೆ ಆಯೋಜಿಸಲಾಗಿದ್ದ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಮನುಷ್ಯ ತನ್ನ ಸಣ್ಣ ಅಜಾಗರೂಕತೆಯಿಂದಾಗಿ ಏಡ್ಸ್ನಂತಹ ಮಾರಕ ಕಾಯಿಲೆಗಳಿಗೆ ಬಲಿಯಾಗುತ್ತಾನೆ. ಇದು ಮನುಷ್ಯನನ್ನು ಮರಣದ ಕಡೆಗೆ ಕೊಂಡೊಯ್ಯುತ್ತದೆ. ರಕ್ತದಾನ ಮತ್ತು ರಕ್ತ ಪಡೆದುಕೊಳ್ಳುವ ಸಂದರ್ಭದಲ್ಲಿ ಈ ಕಾಯಿಲೆ ಹರಡುವ ಸಾಧ್ಯತೆಯಿರುವುದರಿಂದ ಎಚ್ಚರಿಕೆ ವಹಿಸುವದು ಬಹುಮುಖ್ಯ. ಅನೈತಿಕ ಸಂಬಂಧದಿಂದ ಏಡ್ಸ್ ಹರಡುವ ಸಾಧ್ಯತೆ ಹೆಚ್ಚು.
ಆದ್ದರಿಂದ ಮನುಷ್ಯ ನೈತಿಕ ಮಾರ್ಗದಲ್ಲಿ ಜಿವನ ನಡೆಸುವ ಅಗತ್ಯತೆ ಎಂದಿಗಿಂತಲೂ ಇಂದು ಹೆಚ್ಚಾಗಿದೆ. ವಿದ್ಯಾರ್ಥಿಗಳು ತಮ್ಮ ಕಾಲೇಜು ದಿನಗಳಲ್ಲಿ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಮಾರ್ಗದಲ್ಲಿ ಸಾಗಬೇಕು ಎಂದು ತಿಳಿ ಹೇಳಿದರು.
ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಡಾ.ಎಸ್.ಎಚ್. ಖಂಡೋಬ ಪ್ರಾಸ್ತವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಉಪನ್ಯಾಸಕರಾದ ಹೇಮಂತ್ ಉಪಸ್ಥಿತರಿದ್ದರು. ಸಮೀರಾ ಸ್ವಾಗತಿಸಿದರು. ಪೂಜಾ ವಂದಿಸಿದರು.