ನವದೆಹಲಿ (ಪಿಟಿಐ): ಭಾರತದ ಆಟಗಾರರು ದೋಹಾದಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿಯನ್ಷಿಪ್ನಲ್ಲಿ ಉತ್ತಮ ಆರಂಭ ಪಡೆದಿದ್ದಾರೆ. ಐವರು ಆಟಗಾರರು ಎರಡನೇ ಸುತ್ತು ಪ್ರವೇಶಿಸುವಲ್ಲಿ ಯಶಸ್ವಿಯಾದರು.
ದೋಹಾದ ಖಲೀಫಾ ಅಂತರರಾಷ್ಟ್ರೀಯ ಟೆನಿಸ್ ಮತ್ತು ಸ್ಕ್ವಾಷ್ ಸಂಕೀರ್ಣದಲ್ಲಿ ಭಾನುವಾರ ದೀಪಕ್ ಮಿಶ್ರಾ, ವಿವೇಕ್ ದಿನೋದಯ, ಅಭಿಷೇಕ್ ಪ್ರಧಾನ್, ಮಹೇಶ್ ಮನಗಾಂವ್ಕರ್ ಮತ್ತು ವೃಷಭ್ ಕೋಟ್ಯಾನ್ ಎರಡನೇ ಸುತ್ತಿಗೆ ರಹದಾರಿ ಪಡೆದುಕೊಂಡರು. ಆದರೆ ಭಾರತದ ಇನ್ನೊಬ್ಬ ಸ್ಪರ್ಧಿ ಕುಶ ಕುಮಾರ್ ಮೊದಲ ಸುತ್ತಿನಲ್ಲೇ ನಿರ್ಗಮಿಸಿದರು.
ಮಹೇಶ್ಗೆ ಮೊದಲ ಸುತ್ತಿನಲ್ಲಿ `ಬೈ~ ಲಭಿಸಿದರೆ, ಅಭಿಷೇಕ್ `ವಾಕ್ಓವರ್~ ಪಡೆದರು. ದೀಪಕ್ 11-4, 11-6, 12-10 ರಲ್ಲಿ ಕುವೈಟ್ನ ಯೂಸುಫ್ ಅಲಿ ವಿರುದ್ಧ ಗೆದ್ದರು. ಈ ಹೋರಾಟ 35 ನಿಮಿಷಗಳ ಕಾಲ ನಡೆಯಿತು.
ವಿವೇಕ್ 11-1, 11-7, 11-1 ರಲ್ಲಿ ಜಿಂಬಾಬ್ವೆಯ ಬ್ಲೆಸಿಂಗ್ ಮುವಾಟೆ ವಿರುದ್ಧ ಗೆದ್ದರೆ, ವೃಷಭ್ 11-3, 11-4, 11-4 ರಲ್ಲಿ ಜಪಾನ್ನ ಟೈಕಿ ಕೈದೊ ಅವರನ್ನು ಸೋಲಿಸಿದರು. ಗಮನಾರ್ಹ ಪ್ರದರ್ಶನ ನೀಡಿದ ಕುಶ ಕುಮಾರ್ 3-11, 5-11, 3-11 ರಲ್ಲಿ ಪಾಕಿಸ್ತಾನದ ಸಯ್ಯದ್ ಹಮ್ಜಾ ಶಾ ಬುಖಾರಿ ಎದುರು ಪರಾಭವಗೊಂಡರು.