ಬೆಂಗಳೂರು: `ಪರಿಸರ ಕಾಳಜಿಯನ್ನು ವ್ಯಕ್ತಪಡಿಸುವ ಬೇಸಿಗೆ ಶಿಬಿರಗಳಿಗೆ ಹೆಚ್ಚಿನ ಮನ್ನಣೆ ದೊರೆಯಬೇಕು' ಎಂದು ಇನ್ನರ್ವೀಲ್ ಕ್ಲಬ್ ಆಫ್ ಬೆಂಗಳೂರು ಸಂಘಟನೆಯ ಪ್ರತಿಭಾ ಪ್ರಭುದೇವ್ ತಿಳಿಸಿದರು.
ಭಾರತೀಯ ಸಮಾಜ ಸೇವಾ ಟ್ರಸ್ಟ್ ನಗರದ ಅಖಿಲ ಕರ್ನಾಟಕ ಮಕ್ಕಳ ಕೂಟದಲ್ಲಿ ಸೋಮವಾರ ಆಯೋಜಿಸಿದ್ದ `ವಿಶ್ವಭೂಮಿ ದಿನಾಚರಣೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ನೈಸರ್ಗಿಕ ಸಂಪನ್ಮೂಲಗಳ ಮಾರಣ ಹೋಮ ಹಾಗೂ ಅತಿಯಾದ ಮಾಲಿನ್ಯದ ಪ್ರಭಾವದಿಂದಾಗಿ ಭೂಮಿಯಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು, ಈ ಬಗ್ಗೆ ಮುಂದಿನ ಪೀಳಿಗೆಯಲ್ಲಿ ಅರಿವು ಮೂಡಿಸುವ ಅಗತ್ಯವಿದೆ' ಎಂದು ತಿಳಿಸಿದರು.
`ಮಕ್ಕಳಿಗೆ ಸಣ್ಣ ಕತೆಗಳ ಮೂಲಕ ಪರಿಸರ ಸಂರಕ್ಷಣೆ ಮಾಡುವ ಬಗೆಯನ್ನು ನವಿರಾಗಿ ತಿಳಿಸುವ ಅಗತ್ಯವಿದೆ. ಈ ವಿಚಾರದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಬೇಕು' ಎಂದು ಹೇಳಿದರು.
ನಟಿ ಜಯಶ್ರೀ, `ಕಲೆ,ಸಾಹಿತ್ಯ, ಸಂಗೀತ ಸೇರಿದಂತೆ ಪರಿಸರ ಸಂರಕ್ಷಣಾ ಕಾರ್ಯದಲ್ಲಿ ಮಕ್ಕಳನ್ನು ಕಡ್ಡಾಯವಾಗಿ ತೊಡಗಿಸುವತ್ತ ಶಿಕ್ಷಣ ಸಂಸ್ಥೆಗಳು ಹೆಜ್ಜೆ ಇರಿಸಬೇಕಿದೆ. ಕೇವಲ ಪಠ್ಯಚಟುವಟಿಕೆಗಳಿಂದ ವಿದ್ಯಾರ್ಥಿಗಳ ಬೌದ್ಧಿಕ ವಿಕಸನ ಸಾಧ್ಯವಿಲ್ಲ' ಎಂದರು.ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಸಸಿ ವಿತರಿಸಲಾಯಿತು. ಟ್ರಸ್ಟ್ನ ಶಿವಮಲ್ಲು ಉಪಸ್ಥಿತರಿದ್ದರು.