ಇಂಡೊನೇಷ್ಯಾದ ಬಾಲಿಯಲ್ಲಿ ನಡೆದ ವಿಶ್ವ ವ್ಯಾಪಾರ ಸಂಘಟನೆಯ ಸಚಿವರ 9ನೆ ಸಮ್ಮೇಳನ, ಜಾಗತಿಕ ವ್ಯಾಪಾರಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ಒಪ್ಪಂದಕ್ಕೆ ಬಂದಿದೆ.
ಬಡವರಿಗೆ ಅಗ್ಗದ ದರದಲ್ಲಿ ಆಹಾರ ಧಾನ್ಯ ಒದಗಿಸುವ ಆಹಾರ ಭದ್ರತೆ ಯೋಜನೆಗೆ ಯಾವುದೇ ಧಕ್ಕೆ ಒದಗಬಾರದು ಎನ್ನುವ ಭಾರತದ ಕಾಳಜಿಗೆ ಮನ್ನಣೆ ಸಿಕ್ಕಿದೆ. ದೋಹಾ ಸುತ್ತಿನ ಮಾತುಕತೆಗಳಿಗೆ ಚಾಲನೆ ನೀಡಿದ ನಂತರ ಇದೇ ಮೊದಲ ಬಾರಿಗೆ ಇಂತಹ ಒಪ್ಪಂದ ಸಾಧ್ಯವಾಗಿದೆ. 159 ದೇಶಗಳು ‘ಬಾಲಿ ಕೊಡುಗೆ’ಗೆ ಸಮ್ಮತಿಸಿವೆ.
ಸದಸ್ಯ ದೇಶಗಳು ಸಬ್ಸಿಡಿ ದರಗಳಲ್ಲಿ ಆಹಾರ ಧಾನ್ಯ ಒದಗಿಸುವುದಕ್ಕೆ ದಂಡನಾ ಕ್ರಮಗಳನ್ನು ವಿಧಿಸದಿರಲು ‘ಡಬ್ಲ್ಯುಟಿಒ’ ಸಮ್ಮತಿಸಿದೆ. ಆಹಾರ ಭದ್ರತೆ ಯೋಜನೆಗೆ ಸರ್ಕಾರಗಳು ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಇಡುವುದು ವಿವಾದಕ್ಕೆ ಕಾರಣವಾಗಿತ್ತು.
ಸಚಿವರ ಸಮ್ಮೇಳನ
ಸಂಘಟನೆಯ ಸಚಿವರ ಸಮ್ಮೇಳನದಲ್ಲಿಯೇ ಮಹತ್ವದ ನೀತಿ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಪ್ರತಿ 2 ವರ್ಷಕ್ಕೊಮ್ಮೆ ಇಂತಹ ಸಮ್ಮೇಳನ ನಡೆಯುತ್ತದೆ. ಸಂಘಟನೆಯ ಎಲ್ಲ ಸದಸ್ಯ ದೇಶಗಳ ವಾಣಿಜ್ಯ ಸಚಿವರು ಇಂತಹ ಸಮ್ಮೇಳನಗಳಲ್ಲಿ ಭಾಗವಹಿಸುತ್ತಾರೆ.
ದೋಹಾ ಮಾತುಕತೆ
ದೋಹಾದಲ್ಲಿ 2001ರ ನವೆಂಬರ್ ನಲ್ಲಿ ನಡೆದ ಸಚಿವರ ನಾಲ್ಕನೆ ಸಮ್ಮೇಳನದಲ್ಲಿ ಸದ್ಯದ ಸಂಧಾನ ಮಾತುಕತೆಗಳಿಗೆ ಚಾಲನೆ ನೀಡಲಾಗಿತ್ತು.
ಜಾಗತೀಕರಣಕ್ಕೆ ಇನ್ನಷ್ಟು ದೇಶಗಳು ಸೇರ್ಪಡೆಗೊಳ್ಳುವಂತೆ ಮಾಡುವುದು, ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಎದುರಾಗುವ ಅಡೆತಡೆಗಳನ್ನು ನಿವಾರಿಸಿ ಬಡವರಿಗೆ ನೆರವಾಗುವ ಮಹತ್ವಾಕಾಂಕ್ಷೆಯ ಗುರಿಗಳನ್ನು ಈ ಮಾತುಕತೆಗೆ ನಿಗದಿಪಡಿಸಲಾಗಿತ್ತು.2005ರಲ್ಲಿಯೇ ಈ ಮಾತುಕತೆ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಲಾಗಿತ್ತು. ಕಳೆದ ವರ್ಷದವರೆಗೂ ದೋಹಾ ಸುತ್ತಿನ ಮಾತುಕತೆಗಳ ಮುಂದುವರಿಕೆಗೆ ಅನಿಶ್ಚಿತತೆ ತಲೆದೋರಿತ್ತು.
ಅಂತರರಾಷ್ಟ್ರೀಯ ವಾಣಿಜ್ಯ ವ್ಯಾಪಾರ ಉದಾರೀಕರಣಗೊಳಿಸುವ ಮತ್ತು ಅದರ ಮೇಲ್ವಿಚಾರಣೆ ನೋಡಿಕೊಳ್ಳುವ ಉದ್ದೇಶದಿಂದ ವಿಶ್ವ ವ್ಯಾಪಾರ ಸಂಘಟನೆ `ಡಬ್ಲ್ಯುಟಿಒ' 1995ರ ಜನವರಿಯಲ್ಲಿ ಅಸ್ತಿತ್ವಕ್ಕೆ ಬಂದಿತ್ತು.
1948ರಿಂದ ತೆರಿಗೆ ಮತ್ತು ವ್ಯಾಪಾರ ಸಾಮಾನ್ಯ ಒಪ್ಪಂದವು (General Agreement on Tariffs and Trade – -GATT) ‘ಗ್ಯಾಟ್’ ಒಪ್ಪಂದ ಎಂದೇ ಬಳಕೆಯಲ್ಲಿತ್ತು. ಅದರ ಬದಲಿಗೆ 1995ರಲ್ಲಿ ‘ಡಬ್ಲ್ಯುಟಿಒ’ ಅಸ್ತಿತ್ವಕ್ಕೆ ಬಂದಿತು.
ಭಾರತದ ನಿಲುವು
ಕೃಷಿ ರಂಗದಲ್ಲಿನ ತಾರತಮ್ಯಗಳಿಂದ ಕೂಡಿದ ಮತ್ತು ವಹಿವಾಟು ವಿರೂಪಗೊಳಿಸುವ ಸಬ್ಸಿಡಿ ಸಮಸ್ಯೆ ಪರಿಹರಿಸಬೇಕು ಎನ್ನುವುದು ಬಡ ದೇಶಗಳ ಪ್ರಮುಖ ಹಕ್ಕೊತ್ತಾಯವಾಗಿದೆ. ರೈತರಿಗೆ ಗರಿಷ್ಠ ಪ್ರತಿಫಲ ಒದಗಿಸದ ಮುಕ್ತ ವ್ಯಾಪಾರ ವ್ಯವಸ್ಥೆ ಬದಲಿಸಲು ಭಾರತ ನಿರಂತರವಾಗಿ ಪ್ರಯತ್ನಿಸುತ್ತಿದೆ. ಭಾರತದ ನಿಲುವನ್ನು ೧೧೦ಕ್ಕೂ ಹೆಚ್ಚು ಬಡ ದೇಶಗಳು ಬೆಂಬಲಿಸುತ್ತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.