ಬೆಂಗಳೂರು: ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನವನ್ನು ಉದ್ಘಾಟಿಸುವ ವಿಷಯ ದಿನೇದಿನೇ ಕಗ್ಗಂಟಾಗಿದ್ದು, ಸಾಹಿತಿಗಳ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ‘ಉದ್ಯಮಿಯೊಬ್ಬರಿಂದ ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸುತ್ತಿರುವುದು ಕನ್ನಡ ಜನಪದ ಸಂಸ್ಕೃತಿಗೆ ಮಾಡಿದ ಅವಮಾನ’ ಎಂದು ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಅವರು, ಮುಖ್ಯಮಂತ್ರಿಗಳಿಗೆ ಶನಿವಾರ ಬರೆದಿರುವ ಪತ್ರದಲ್ಲಿ ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಅವರಿಂದ ಬಂಡವಾಳಗಾರರ ಸಮಾವೇಶವನ್ನು ಉದ್ಘಾಟಿಸಬಹುದೇ ಹೊರತು, ವಿಶ್ವಕನ್ನಡ ಸಮ್ಮೇಳನವಲ್ಲ. ಕನ್ನಡಕ್ಕೆ ಅವರ ಕೊಡುಗೆ ಏನು? ಕನ್ನಡದ ಒಂದೇ ಒಂದು ತಂತ್ರಾಂಶವೂ ಅವರ ಬಹುರಾಷ್ಟ್ರೀಯ ಕಂಪನಿಯಿಂದ ಬಂದಿಲ್ಲ’ ಎಂದು ಅವರು ಟೀಕಿಸಿದ್ದಾರೆ.
ನಾರಾಯಣಮೂರ್ತಿ ಅವರು ಮೊದಲನೆಯ ತರಗತಿಯಿಂದಲೇ ಶಿಕ್ಷಣದಲ್ಲಿ ಆಂಗ್ಲ ಮಾಧ್ಯಮ ಇರಬೇಕೆಂದು ಪ್ರಬಲವಾಗಿ ಪ್ರತಿಪಾದಿಸುತ್ತಾ ಬಂದಿದ್ದಾರೆ. ಅಲ್ಲದೆ, ಕಂಪನಿಯ ಉದ್ಯೋಗಿಗಳಿಗಾಗಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಆರಂಭಿಸಲು ಈ ಹಿಂದೆ ಅವರು ಪ್ರಯತ್ನಿಸಿದ್ದರು. ಎಂದು ಬರಗೂರು ನೆನಪಿಸಿದ್ದಾರೆ.ಅಲ್ಲದೆ ಇತ್ತೀಚೆಗೆ ನಾರಾಯಣ ಮೂರ್ತಿ ಅವರು ಆದಾಯ ತೆರಿಗೆ ಇಲಾಖೆಗೆ ತಪ್ಪು ಮಾಹಿತಿ ನೀಡಿದ್ದು, 450 ಕೋಟಿ ರೂಪಾಯಿ ವಸೂಲಿಗೆ ಆದೇಶವಾಗಿರುವುದನ್ನೂ ತಾವು ಗಮನಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ನೆನಪಿಸಿರುವ ಬರಗೂರು ರಾಮಚಂದ್ರಪ್ಪನವರು ವಿಶ್ವಕನ್ನಡ ಸಮ್ಮೇಳನದ ಉದ್ಘಾಟನೆಗೆ ನಾರಾಯಣಮೂರ್ತಿ ಅವರನ್ನು ಆಹ್ವಾನಿಸಬಾರದು ಎಂದು ಮನವಿ ಮಾಡಿದ್ದಾರೆ. ಅವರನ್ನು ಅತಿಥಿಗಳಾಗಿ ಆಹ್ವಾನಿಸಬಹುದು ಎಂದೂ ಸಲಹೆ ಮಾಡಿದ್ದಾರೆ.
ವೇದಿಕೆ ಖಂಡನೆ: ಉದ್ಯಮಿ ನಾರಾಯಣ ಮೂರ್ತಿ ಅವರಿಂದ ಸಮ್ಮೇಳನವನ್ನು ಉದ್ಘಾಟಿಸುವುದಕ್ಕಿಂತ ಹೆಸರಾಂತ ಸಾಹಿತಿಗಳಿಂದ ವಿಶ್ವಕನ್ನಡ ಸಮ್ಮೇಳನವನ್ನು ಉದ್ಘಾಟಿಸಬೇಕೆಂದು ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ ಒತ್ತಾಯಿಸಿದೆ.