ಕೋಲ್ಕತ್ತ (ಪಿಟಿಐ): ಭಾರತದ ಸ್ಪರ್ಧಿಗಳು ಕೊಲಂಬಿಯದ ಮೆಡೆಲಿನ್ನಲ್ಲಿ ನಡೆಯುತ್ತಿರುವ ವಿಶ್ವಕಪ್ ಆರ್ಚರಿ `ಹಂತ-3' ಟೂರ್ನಿಯ ಪುರುಷರ ಕಾಂಪೋಂಡ್ ತಂಡ ವಿಭಾಗದಲ್ಲಿ ಕಂಚು ಗೆದ್ದುಕೊಂಡಿದ್ದಾರೆ.
ರಜತ್ ಚೌಹಾಣ್, ಸಂದೀಪ್ ಕುಮಾರ್ ಹಾಗೂ ರತನ್ ಸಿಂಗ್ ಖುರೈಜಾಮ್ ಅವರನ್ನೊಳಗೊಂಡ ಭಾರತ ತಂಡ 215-210ರಲ್ಲಿ ಆತಿಥೇಯ ಕೊಲಂಬಿಯವನ್ನು ಮಣಿಸಿತು.
ಬಲವಾಗಿ ಬೀಸುತ್ತಿದ್ದ ಗಾಳಿಯಲ್ಲಿಯೇ ನಡೆದ ಸ್ಪರ್ಧೆಯಲ್ಲಿ ಭಾರತ ಉತ್ತಮ ಆರಂಭ ಪಡೆಯಿತು. ಮೊದಲ ಸೆಟ್ನಲ್ಲಿ ಕೊಲಂಬಿಯದ ಜುವಾನ್ ಕಾರ್ಲೊಸ್ ಕರ್ಯಾಸ್ಕ್ವಿಲ್ಲಾ, ಕ್ಯಾಮಿಲೊ ಆ್ಯಂಡ್ರೆಸ್ ಕರ್ಡೊನಾ ಹಾಗೂ ಜೋಸ್ ಕಾರ್ಲೊಸ್ ಒಸ್ಪಿನಾ ಅವರನ್ನೊಳಗೊಂಡ ತಂಡದ ವಿರುದ್ಧ 52-50ರಲ್ಲಿ ಮುನ್ನಡೆ ಸಾಧಿಸಿತು.
ಆದರೆ ಎರಡನೇ ಸೆಟ್ನಲ್ಲಿ ಮರು ಹೋರಾಟ ನಡೆಸಿದ ಸ್ಥಳೀಯ ತಂಡ 54-50 ರಿಂದ ಮುನ್ನಡೆ ಸಾಧಿಸಿತು. ಮೂರನೇ ಸೆಟ್ನಲ್ಲಿ ಚೇತರಿಸಿಕೊಂಡ ಭಾರತ ಒಟ್ಟು ಮುನ್ನಡೆಯನ್ನು 158-156ಕ್ಕೆ ಹೆಚ್ಚಿಸಿಕೊಂಡಿತು. ನಿರ್ಣಾಯಕ ಸೆಟ್ನಲ್ಲಿ ಭಾರತ 57 ಪಾಯಿಂಟ್ ಗಳಿಸಿತು. ಈ ಮೂಲಕ 215-210ರಲ್ಲಿ ಗೆದ್ದು ಕಂಚಿನ ಪದಕಕ್ಕೆ ಕೊರಳೊಡ್ಡಿತು.
ರಿಕರ್ವ್ ಸ್ಪರ್ಧೆಯ ಮಹಿಳೆಯರ ತಂಡ ವಿಭಾಗದಲ್ಲಿ ಫೈನಲ್ ಪ್ರವೇಶಿಸಿರುವ ಭಾರತ, ಚಿನ್ನಕ್ಕಾಗಿ ಚೀನಾದ ವಿರುದ್ಧ ಪೈಪೋಟಿ ನಡೆಸಲಿದೆ. ಟೂರ್ನಿಯ ರಿಕರ್ವ್ ಮಿಶ್ರ ತಂಡ ವಿಭಾಗದಲ್ಲಿ ಭಾರತದ ಕಂಚಿನ ಪದಕದ ಆಸೆ ಇನ್ನೂ ಜೀವಂತವಿದ್ದು, ಅತಾನು ದಾಸ್ ಹಾಗೂ ದೀಪಿಕಾ ಕುಮಾರಿ, ಮೆಕ್ಸಿಕೊದ ವಿರುದ್ಧ ಸೆಣಸಲಿದ್ದಾರೆ.