ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಕುಮಾರಸ್ವಾಮಿ ಮತ್ತು ಸುಬ್ಬರಾಯನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ (ಎನ್ಎಂಡಿಸಿ) ಗುತ್ತಿಗೆ ಪ್ರದೇಶದಲ್ಲಿ ₨ 1,232 ಕೋಟಿ ಮೌಲ್ಯದ ಅದಿರು ಲೂಟಿ ಮಾಡಲು ಡೆಕ್ಕನ್ ಮೈನಿಂಗ್ ಸಿಂಡಿಕೇಟ್ ಕಂಪೆನಿಗೆ ಸಹಕರಿಸಿದ ಆರೋಪ ವಿಶ್ವನಾಥನ್ ಮೇಲಿದೆ.
ವಿಶ್ವನಾಥನ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎನ್. ಆನಂದ ನಡೆಸಿದ್ದರು. ಆದೇಶವನ್ನು ಕಾಯ್ದಿರಿಸಲಾಗಿತ್ತು. ‘ವಿಶ್ವನಾಥನ್ ಅವರು ₨ 1 ಲಕ್ಷ ಮೌಲ್ಯದ ಬಾಂಡ್ ನೀಡಬೇಕು. ಇಬ್ಬರ ವೈಯಕ್ತಿಕ ಭದ್ರತೆ ನೀಡಬೇಕು. ಸಾಕ್ಷಿಗಳ ನಾಶಕ್ಕೆ ಯತ್ನಿಸಬಾರದು’ ಎಂದು ಆದೇಶದಲ್ಲಿ ಷರತ್ತು ವಿಧಿಸಲಾಗಿದೆ.
ಸಿಬಿಐ ಅನುಮತಿಯಿಲ್ಲದೆ ಬೇರೆಡೆ ತೆರಳುವಂತಿಲ್ಲ. ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು. ಈ ಷರತ್ತುಗಳಲ್ಲಿ ಯಾವುದನ್ನೇ ಉಲ್ಲಂಘಿಸಿದರೂ, ನ್ಯಾಯಾಲಯದ ಮೊರೆ ಹೋಗಲು ಸಿಬಿಐ ಸ್ವತಂತ್ರವಾಗಿದೆ ಎಂದು ನ್ಯಾಯಮೂರ್ತಿಯವರು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಪೊಲೀಸ್ ಇನ್ಸ್ಪೆಕ್ಟರ್ ರಮಾಕಾಂತ ಹುಲ್ಲೂರು ಅವರಿಗೂ ಜಾಮೀನು ದೊರೆತಿದೆ.