‘ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ‘ಸ್ಕ್ರೀಪ್ಸ್ ಸಾಗರವಿಜ್ಞಾನ (ಒಷನಾಗ್ರಫಿ) ಸಂಸ್ಥೆ’ಯ ರಾಮನಾಥನ್ ಅವರನ್ನು ಈ ಬಾರಿಯ ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದು ‘ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ’ (ಯುಎನ್ಇಪಿ) ವಿಭಾಗ ಹೇಳಿಕೆಯಲ್ಲಿ ತಿಳಿಸಿದೆ. ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿರುವುದರ ಕುರಿತು ಪ್ರತಿಕ್ರಿಯಿಸಿರುವ ರಾಮನಾಥನ್, ‘ಪರಿಸರದ ಮೇಲೆ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡುವ ಅಂಶಗಳನ್ನು ವಿವರಿಸುವ ವಿಜ್ಞಾನ ಮತ್ತು ಸಂಶೋಧನೆಯ ನಿರ್ಣಾಯಕ ಪಾತ್ರವನ್ನು ಗುರುತಿಸಿ, ನನ್ನನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಹೆಚ್ಚಿನ ಗೌರವ ತಂದಿದೆ’ ಎಂದಿದ್ದಾರೆ.
ರಾಮನಾಥನ್ ನೇತೃತ್ವದ ಸಂಶೋಧನಾ ತಂಡ ಮೊದಲ ಬಾರಿಗೆ 1997ರಲ್ಲಿ ಅತಿಯಾದ ವಾಯುಮಾಲಿನ್ಯದಿಂದಾಗಿ ಏಷ್ಯಾದ ವಾತಾವರಣದ ಮೇಲೆ ಉಂಟಾಗುತ್ತಿರುವ ಪ್ರತಿಕೂಲ ಪರಿಣಾಮವನ್ನು ಪತ್ತೆ ಹಚ್ಚಿತ್ತು. ವಿಶ್ವದ ಗಮನ ಸೆಳೆದಿದ್ದ ರಾಮನಾಥನ್ ನೇತೃತ್ವದ ಈ ಸಂಶೋಧನೆ, ‘ವಾಯುಮಂಡಲದ ಕಂದು ಮೋಡ’ (ಎಬಿಸಿ– ಆಟ್ಮಸ್ಫೆರಿಕ್ ಬ್ರೌನ್ ಕ್ಲೌಡ್) ಎಂದೇ ಖ್ಯಾತಿಯಾಗಿತ್ತು.
ವಾತಾವರಣಕ್ಕೆ ಬಿಡುಗಡೆಯಾಗುವ ‘ಕಪ್ಪು ಇಂಗಾಲ’ವನ್ನು ತಗ್ಗಿಸಲು 16 ಕಾರ್ಯವಿಧಾನಗಳನ್ನು ಸೂಚಿಸಿದ್ದ ರಾಮನಾಥನ್, ‘ಆ ಮೂಲಕ ಉಸಿರಾಟದ ತೊಂದರೆಯಿಂದಾಗಿ ಪ್ರತಿ ವರ್ಷ ವಿಶ್ವದಾದ್ಯಂತ ಅಸುನೀಗುವ 20.5 ಲಕ್ಷ ಜನರನ್ನು ಉಳಿಸುವ ಜತೆಗೆ, ಯಥೇಚ್ಚ ಪ್ರಮಾಣದ ಬೆಳೆ ನಷ್ಟವನ್ನು ತಡೆಯಬಹುದು’ ಎಂದು ತಮ್ಮ ಸಂಶೋಧನೆಯಲ್ಲಿ ತಿಳಿಸಿದ್ದರು.