ಪಟ್ನಾ (ಪಿಟಿಐ): ಪ್ರಜೆಗಳಿಂದ ಪ್ರತಿಭಟನೆ ಎದುರಿಸುತ್ತಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಮತದಾರರ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ~ ಎಂದು ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷ ಮಾರ್ಕಂಡೇಯ ಖಟ್ಜು ಅಭಿಪ್ರಾಯಪಟ್ಟಿದ್ದಾರೆ.
`ನಿತೀಶ್ ಕುಮಾರ್ ಅವರ `ಅಧಿಕಾರ ಯಾತ್ರೆ~ ಸಮಯದಲ್ಲಿ ಸಾರ್ವಜನಿಕರು ಕಪ್ಪು ಬಾವುಟ ತೋರಿಸುವ ಮೂಲಕ ಪ್ರತಿಭಟನೆ ನಡೆಸಿದರು. ಇದು ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಅವರು ವಿಫಲರಾಗುತ್ತಿದ್ದಾರೆ ಎಂಬುದರ ಸೂಚನೆ~ ಎಂದು ಅವರು ಹೇಳಿದರು.
ಏಳು ವರ್ಷಗಳ ನಂತರ ಅಧಿಕಾರ ಪಡೆದರೂ ನಿತೀಶ್ ಕುಮಾರ್ ಅವರು, ಅಭಿವೃದ್ಧಿ, ಉದ್ಯೋಗ ಮತ್ತು ವಿದ್ಯುತ್ ಕ್ಷೇತ್ರಗಳಲ್ಲಿರುವ ಕೊರತೆಯನ್ನು ನೀಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಖಟ್ಜು ಆರೋಪಿಸಿದರು.
`ಅಧಿಕಾರ ಯಾತ್ರಾ~ ಸಮಯದಲ್ಲಿ ಸಾರ್ವಜನಿಕರು ನಡೆಸಿದ ಪ್ರತಿಭಟನೆಯ ತೀವ್ರತೆ ಹೇಗಿತ್ತೆಂದರೆ, ನಿತೀಶ್ ಕುಮಾರ್ ತಮ್ಮ ಯಾತ್ರೆಯನ್ನೇ ಅರ್ಧಕ್ಕೆ ಮೊಟಕುಗೊಳಿಸುವಂತಾಯಿತು. ಈ ಮೂಲಕ ತನ್ನನ್ನು ನಿರಂತರವಾಗಿ ಅಧಿಕಾರದ ಗದ್ದುಗೆಗೆ ಏರಿಸಿದ ಪ್ರಜೆಗಳನ್ನು ಎದುರಿಸಲು ಅವರಿಗೆ ಆಗಲಿಲ್ಲ~ ಎಂದು ಖಟ್ಜು ಮತದಾರರ ಪ್ರತಿಭಟನೆಯ ತೀವ್ರತೆಯನ್ನು ಉಲ್ಲೇಖಿಸಿದರು. ಅರ್ಧಕ್ಕೆ ಮೊಟಕುಗೊಳಿಸಿದ ಅಧಿಕಾರ ಯಾತ್ರೆಯಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ, ಜನರಿಗಿಂತ ಪೊಲೀಸರೇ ಹೆಚ್ಚಾಗಿರುತ್ತಿದ್ದರು ಎಂದರು.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಗುಜರಾತ್ನ ಅಭಿವೃದ್ಧಿ ಮಾದರಿ ಬಗ್ಗೆಯೂ ಟೀಕಿಸಿದ ಖಟ್ಜು ಅವರು, `ಈ ರಾಜ್ಯದಲ್ಲಿ ಅತಿ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ದೇಶದಲ್ಲಿರುವ ಅಪೌಷ್ಟಿಕ ಮಕ್ಕಳ ಸಂಖ್ಯೆ ಶೇ 46 ಆದರೆ, ಗುಜರಾತ್ ರಾಜ್ಯದಲ್ಲಿ ಶೇ 47~ ಎಂದು ಅಂಕಿ ಅಂಶ ನೀಡಿದರು.