ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾಸಮತ ಅನಿವಾರ್ಯ

Last Updated 2 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಹದಿನಾರು ಶಾಸಕರ ಅನರ್ಹತೆ ರದ್ದುಗೊಳಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರ ಇಡೀ ದೇಶದಲ್ಲಿ ಒಂದು ರೀತಿಯಲ್ಲಿ ಗೊಂದಲಕರ ವಾತಾವರಣ ನಿರ್ಮಾಣವಾಗಿತ್ತು. ಈ ಬಗ್ಗೆ ರಾಜ್ಯದ ಜನತೆಗೆ ಮನವರಿಕೆ ಮಾಡಿಕೊಡುವ ಅಗತ್ಯವಿದ್ದುದರಿಂದ ಸದನದಲ್ಲಿ ಮತ್ತೆ ವಿಶ್ವಾಸಮತ ಸಾಬೀತುಪಡಿಸುವುದು ಅನಿವಾರ್ಯವಾಗಿತ್ತು~ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ವಿಶ್ವಾಸಮತ ಯಾಚಿಸಿದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡರು.

ವಿಧಾನಸಭೆ ಅಧಿವೇಶನದ ಮೊದಲ ದಿನದ ಕಲಾಪವನ್ನು ಮುಂದೂಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

`ಸುಪ್ರೀಂಕೋರ್ಟ್ ತೀರ್ಪಿನ ನಂತರ ಪ್ರತಿಪಕ್ಷಗಳು ರಾಜಭವನ ಹಾಗೂ ರಾಜ್ಯಪಾಲರನ್ನು ದುರುಪಯೋಗ ಮಾಡಿಕೊಂಡವು. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವಂತೆ ಕೋರಿ ರಾಜ್ಯಪಾಲರು ಕೂಡ ಕೇಂದ್ರಕ್ಕೆ ಶಿಫಾರಸು ಮಾಡಿದರು. ಒಂದು ಕಡೆ ರಾಜ್ಯಪಾಲರು ಸರ್ಕಾರಕ್ಕೆ ಬಹುಮತವಿದೆ ಎನ್ನುವ ಒಳ್ಳೆಯ ಮಾತುಗಳನ್ನಾಡಿದರೆ, ಮತ್ತೊಂದೆಡೆ ಗೌಪ್ಯವಾಗಿ ಸರ್ಕಾರವನ್ನು ಅಮಾನತುಗೊಳಿಸಲು ಕೇಂದ್ರಕ್ಕೆ ಶಿಫಾರಸು ಮಾಡತೊಡಗಿದರು.
 
ಈ ಬೆಳವಣಿಗೆಗಳ ನಂತರ 11 ಮಂದಿ ಬಿಜೆಪಿ ಶಾಸಕರು ಲಿಖಿತವಾಗಿ ಪತ್ರ ನೀಡುವ ಮೂಲಕ ಸರ್ಕಾರವನ್ನು ಬೆಂಬಲಿಸಿದರು. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಒಟ್ಟಾಗಿದ್ದೇವೆ ಎಂಬುದನ್ನು ಜನತೆಗೆ ಮನವರಿಕೆ ಮಾಡಿಕೊಡುವ ಅಗತ್ಯವಿತ್ತು. ಸದನದಲ್ಲಿ ಬಹುಮತ ಸಾಬೀತುಪಡಿಸಿ ಕಾರ್ಯಕಲಾಪ ನಡೆಸುವ ಅನಿವಾರ್ಯ ಪ್ರಸಂಗವೂ ತಲೆದೋರಿತ್ತು~ ಎಂದು ಅವರು ಹೇಳಿದರು.

ಸ್ಪೀಕರ್ ಬದಲಾವಣೆ ಇಲ್ಲ: `ವಿಧಾನಸಭಾ ಅಧ್ಯಕ್ಷ ಕೆ.ಜಿ. ಬೋಪಯ್ಯ ಅವರನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಇನ್ನೆರಡು ವರ್ಷಗಳ ಕಾಲ ಬೋಪಯ್ಯ ಅವರೇ ಸಭಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ~ ಎಂದು ಪುನರುಚ್ಚರಿಸಿದ ಮುಖ್ಯಮಂತ್ರಿಗಳು, `ಪ್ರತಿಪಕ್ಷಗಳು ಸದನದಲ್ಲಿ ಸ್ಪೀಕರ್ ವಿರುದ್ಧ ಅವಹೇಳನಕಾರಿಯಾಗಿ ನಿಂದಿಸಿರುವುದನ್ನು ಹಕ್ಕು ಬಾಧ್ಯತಾ ಸಮಿತಿಗೆ ಒಪ್ಪಿಸುವಂತೆ ನಾವು ಸಭಾಧ್ಯಕ್ಷರನ್ನು ಕೋರಿದ್ದೇವೆ. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಸಭಾಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.
 
ಮುಂದಿನ ತೀರ್ಮಾನ ಕೈಗೊಳ್ಳುವುದು ಸಭಾಧ್ಯಕ್ಷರ ವಿವೇಚನೆಗೆ ಬಿಟ್ಟದ್ದು~ ಎಂದು ಪ್ರತಿಕ್ರಿಯಿಸಿದರು.
`ದೇಶದಲ್ಲಿ ಕೆಳಹಂತದ ನ್ಯಾಯಾಲಯಗಳು ನೀಡಿದ ತೀರ್ಪಿಗೆ ವ್ಯತಿರಿಕ್ತವಾಗಿ ಮೇಲಿನ ಹಂತದ ನ್ಯಾಯಾಲಯಗಳು ತೀರ್ಪು ನೀಡಿದ ಉದಾಹರಣೆಗಳು ಹಲವಾರು ಇವೆ. ಆದರೆ, ಅದನ್ನೇ ಬಂಡವಾಳ ಮಾಡಿಕೊಂಡು ಕಾಂಗ್ರೆಸ್- ಜೆಡಿಎಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವುದು ಅಕ್ಷಮ್ಯ ಅಪರಾಧ~ ಎಂದು ಟೀಕಿಸಿದರು.

`ಪ್ರತಿಪಕ್ಷಗಳು ಸದನದೊಳಗೆ ಚರ್ಚೆಗೆ ಬರಲಿ. ಹಳೆಯ ವಿಷಯಗಳನ್ನೆಲ್ಲಾ ಕೆದಕಿ ವರ್ತಮಾನದಲ್ಲಿ ಗೊಂದಲ ಸೃಷ್ಟಿಸುವುದು ಬೇಡ. ಪೂರ್ಣ ಬಜೆಟ್‌ಗೆ ಅನುಮೋದನೆ ಸಿಗಬೇಕಾದರೆ ಕಾರ್ಯಕಲಾಪದಲ್ಲಿ ಭಾಗವಹಿಸಬೇಕು. ಅಭಿವೃದ್ಧಿಗೆ ಸಹಕರಿಸಬೇಕು. ಪ್ರತಿಪಕ್ಷಗಳಿಂದ ಸರ್ಕಾರ ಇಂತಹ ಔದಾರ‌್ಯವನ್ನು ನಿರೀಕ್ಷಿಸುತ್ತದೆ~ ಎಂದು ಕೋರಿದರು.

ಕೇಂದ್ರ ಸರ್ಕಾರದ ಸಲಹಾ ಪತ್ರದ ಕೇಳಿದ ಪ್ರಶ್ನೆಗೆ, ಸಂವಿಧಾನದ 355ನೇ ವಿಧಿ ಅಡಿ ಕೇಂದ್ರ ಬರೆದ ಗೌಪ್ಯ ಪತ್ರಕ್ಕೆ ನಾನು ಕೂಡ ಗೌಪ್ಯವಾಗಿಯೇ ಉತ್ತರ ನೀಡಿದ್ದೇನೆ. ಸೂಕ್ತ ಕಾಲದಲ್ಲಿ ಪತ್ರ ಬಹಿರಂಗಪಡಿಸುತ್ತೇನೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT