ಶರಾವತಿ ಹಿನ್ನೀರಿನ ತುಮರಿಯಲ್ಲಿ ಏಳನೇ ತರಗತಿಯವರೆಗೆ ಓದಿದೆ. ನಂತರ ಅಣ್ಣನ ಜತೆ ಹೆಗ್ಗೋಡಿಗೆ ಹೋದೆ. ಅಲ್ಲಿ ಅಣ್ಣ ಮತ್ತು ನಾನು 8 ಮತ್ತು 9 ತರಗತಿ ಓದಿದೆವು. ಎಸ್ಸೆಸ್ಸೆಲ್ಸಿಗೆ ಅಣ್ಣನ ಜತೆ ಉಡುಪಿಯ ಕಡಿಯಾಳಿಯ ಕಮಲಾಬಾಯಿ ಹೈಸ್ಕೂಲ್ಗೆ ಸೇರಿಕೊಂಡೆ.
ಕನ್ನಡ ಮಾಧ್ಯಮವಾದ್ದರಿಂದ ಉತ್ತಮ ಅಂಕಗಳು ಬಂದವು.
`ಮಗ ಡಾಕ್ಟರ್ ಆಗಬೇಕು; ನಮ್ಮ ಊರಿಲ್ಲೇ ಸೇವೆ ಸಲ್ಲಿಸಬೇಕು~ ಎಂಬುದು ಅಪ್ಪನ ಆಸೆಯಾಗಿತ್ತು. ಅದರಂತೆ ಉಡುಪಿಯ ಎಂಜೆಎಂ ಕಾಲೇಜಿನಲ್ಲಿ ಪಿಯುಸಿ ಸೈನ್ಸ್ ಸೇರಿದೆ. ಆರಂಭದಲ್ಲಿ ಸಾಕಷ್ಟು ಒದ್ದಾಡಿದೆ.
ಇಂಗ್ಲಿಷ್ ಕಷ್ಟ ಅನ್ನಿಸಿತು. ಅಣ್ಣ ಇಂಗ್ಲಿಷ್ ಗ್ರಾಮರ್ ಹೇಳಿ ಕೊಟ್ಟ. ಸ್ವಲ್ಪ ಧೈರ್ಯ ಬಂತು. ನನ್ನಂತೆಯೇ ಇಂಗ್ಲಿಷ್ನಲ್ಲಿ ಒದ್ದಾಡುತ್ತಿದ್ದವರು ಜತೆಯಾದರು. ಅವರೊಂದಿಗೆ ಇಂಗ್ಲಿಷ್ನಲ್ಲೇ ಮಾತನಾಡಲು ಆರಂಭಿಸಿ ಕೀಳರಿಮೆ ಕಳೆದುಕೊಂಡೆ.
ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿದೆ. ನಂತರ ಅಪ್ಪನ ಆಸೆಯಂತೆ ಸರಿಯಾದ ಸಾರಿಗೆ ಸಂಪರ್ಕ ಇಲ್ಲದ ತುಮರಿಯಲ್ಲಿ 10ವರ್ಷಗಳ ಕಾಲ ವೈದ್ಯನಾಗಿ ಕೆಲಸ ಮಾಡಿದೆ. ನಂತರ ದಾವಣಗೆರೆ ಎಂ.ಡಿ. ಮಾಡಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಬಂದು ಈಗ ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದೇನೆ.
ಇದೇನೂ ದೊಡ್ಡ ಸಾಧನೆ ಅಲ್ಲ; ಮಾತೃಭಾಷೆಯಲ್ಲಿ ಕಲಿಯುವುದರಿಂದ ಯಾವುದೇ ವಿಷಯದ ಬಗ್ಗೆ ಸ್ಪಷ್ಟತೆ, ನಿಖರತೆ ಗಳಿಸಲು ಸಾಧ್ಯವಾಗುತ್ತದೆ. ಇಂಗ್ಲಿಷ್ ಮಾಧ್ಯಮದಲ್ಲಿ ಓದಿದವರಿಗಿಂತ ಹೆಚ್ಚಿನ ಗ್ರಹಿಕೆ ನಮಗಿದೆ. ಆದರೆ, ಸಂವಹನ ಮಾಡುವಾಗ ಸ್ವಲ್ಪ ಎಡವುತ್ತೇವಷ್ಟೇ. ಅದನ್ನೂ ನಿವಾರಿಸಿಕೊಳ್ಳಬಹುದು.
ಡಾ. ಪಿ.ಟಿ.ಶಿವಾನಂದ, ಶಿವಮೊಗ್ಗ
(ನಿರೂಪಣೆ: ಪ್ರಕಾಶ್ ಕುಗ್ವೆ)