ಬೆಂಗಳೂರು: ನಗರದ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಕೆ.ಗೋವಿಂದರಾಜ್ ಅವರ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ.
`ಪ್ರಜಾವಾಣಿ~ಯ ನ.21ರ ಸಂಚಿಕೆಯಲ್ಲಿ ಗೋವಿಂದರಾಜ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಪ್ಪಾಗಿ ಪ್ರಕಟಿಸಲಾಗಿತ್ತು. ಇದಕ್ಕಾಗಿ ವಿಷಾದಿಸುತ್ತೇವೆ.
ಸುಜಾತಾ ಸುರೇಶ್ ಎಂಬುವರು ದಾಖಲಿಸಿರುವ ದೂರಿನಲ್ಲಿ ಗೋವಿಂದರಾಜ್ ಅವರ ಹೆಸರು ನಮೂದಾಗಿಲ್ಲ. ಸುಜಾತಾ ಅವರು ನೀಡಿರುವ ದೂರಿನಲ್ಲಿ ಹಾಗೂ ದಾಖಲಾಗಿರುವ ಪ್ರಥಮ ಮಾಹಿತಿ ವರದಿಯಲ್ಲೂ ಗೋವಿಂದಣ್ಣ ಎಂಬ ಹೆಸರನ್ನು ಪ್ರಸ್ತಾಪಿಸಲಾಗಿದೆ. ಆದರೆ ಎಲ್ಲಿಯೂ ಗೋವಿಂದರಾಜ್ ಎಂದು ನಮೂದಿಸಿಲ್ಲ.
`ಇಬ್ಬರು ಅಪರಿಚಿತ ವ್ಯಕ್ತಿಗಳು, ಗೋವಿಂದಣ್ಣ ಮತ್ತು ಗೌಡ ಅವರ ವಿರುದ್ಧ ನಿಮ್ಮ ಪತಿ ನೀಡಿರುವ ದೂರನ್ನು ಹಿಂದಕ್ಕೆ ಪಡೆಯಬೇಕು ಎಂದು ಪ್ರಾಣ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಿ~ ಎಂದಷ್ಟೇ ಸುಜಾತಾ ದೂರಿನಲ್ಲಿ ತಿಳಿಸಿದ್ದಾರೆ.
ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಗೋವಿಂದರಾಜ್ ಸ್ಪಷ್ಟಪಡಿಸಿದ್ದಾರೆ.
ಗೋವಿಂದರಾಜ್ ಅವರ ವಿರುದ್ಧ ಪ್ರಕರಣ ದಾಖಲಾಗಿರುವ ಸುದ್ದಿ ಖಚಿತಪಡಿಸಿಕೊಳ್ಳಲು ಜಯನಗರ ಉಪ ವಿಭಾಗದ ಎಸಿಪಿ ಜಿ.ಬಿ. ಮಂಜುನಾಥ್ ಅವರನ್ನು ದೂರವಾಣಿ ಮೂಲಕ ಭಾನುವಾರ ಸಂಪರ್ಕಿಸಿದ್ದಾಗ `ಗೋವಿಂದರಾಜ್ ಅವರ ವಿರುದ್ಧ ದೂರು ದಾಖಲಾಗಿದೆ~ ಎಂದು ತಿಳಿಸಿದ್ದರು.