ಶ್ರೀರಂಗಪಟ್ಟಣ: ವಿಷಾಹಾರ ಸೇವನೆಯಿಂದ ಮಹಿಳೆಯೊಬ್ಬರು ಮೃತಟ್ಟು 6 ಮಂದಿ ಅಸ್ವಸ್ಥಗೊಂಡಿರುವ ಪ್ರಕರಣ ತಾಲ್ಲೂಕಿನ ಕೆಆರ್ಎಸ್ ಪೊಲೀಸ್ ಠಾಣೆ ವ್ಯಾಪ್ತಿಯ ಬನ್ನಂಗಾಡಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಬನ್ನಂಗಾಡಿ ಗ್ರಾಮದ ಕಳಸೇಗೌಡ ಎಂಬವರ ಪತ್ನಿ ಜಯಮ್ಮ (60) ಮೃತಪಟ್ಟಿದ್ದು, ಕಳಸೇಗೌಡ, ಮಗ ಯೋಗೀಶ್, ಪುತ್ರಿ ಕಳಸಮ್ಮ, ಸೊಸೆ ಕಾವ್ಯ, ಮೊಮ್ಮಕ್ಕಳಾದ ಶಿಲ್ಪ ಹಾಗೂ ಪ್ರಕೃತಿ ಅಸ್ವಸ್ಥಗೊಂಡಿದ್ದಾರೆ. ಜಯಮ್ಮ ಅವರನ್ನು ಬನ್ನಂಗಾಡಿ ಗ್ರಾಮದಿಂದ ಪಾಂಡವಪುರ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಅಸ್ವಸ್ಥರಿಗೆ ಪಾಂಡವಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಬ್ ಇನ್ಸ್ಪೆಕ್ಟರ್ ಹರೀಶ್ಕುಮಾರ್ ತಿಳಿಸಿದ್ದಾರೆ.
ಬುಧವಾರ ರಾತ್ರಿ ರಾಗಿಮುದ್ದೆ, ಅನ್ನ, ಸಾರು ತಿಂದು ಮಲಗಿದ ಕಳಸೇಗೌಡ ಇತರರು ತಡರಾತ್ರಿ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡಿದ್ದಾರೆ. ಊಟ ಮಾಡಿದ ಒಂದು ಗಂಟೆಯ ನಂತರ ವಾಂತಿ, ಭೇದಿ ಶುರುವಾಗಿದೆ. ಕಲುಷಿತ ಆಹಾರ ಸೇವನೆಯೇ ಇದಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕೆಆರ್ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.