ಯಾದಗಿರಿ: ಪಕ್ಷದ ಅಭ್ಯರ್ಥಿಗಳ ಕುರಿತು ಅಭಿಪ್ರಾಯ ಸಂಗ್ರಹಕ್ಕೆ ಸೋಮವಾರ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ವೀಕ್ಷಕರು ಆಗಮಿಸಿದ್ದಾಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾರಾಮಾರಿ ನಡೆಯಿತು.
ವೀಕ್ಷಕರಾದ ವಿಧಾನ ಪರಿಷತ್ ಮಾಜಿ ಸದಸ್ಯರಾದ ಮಸೂದ್, ಶ್ರೀನಾಥ್, ಕೆಪಿಸಿಸಿ ಕಾರ್ಯದರ್ಶಿ ಯು. ಭೂಪತಿ, ಪ್ರಧಾನ ಕಾರ್ಯದರ್ಶಿ ಡಿ. ಗೌತಮ್ ಇದಕ್ಕೆ ಸಾಕ್ಷಿಯಾದರು.
ಮುಖಂಡರ ಬೆಂಬಲಿಗರ ಜೈಕಾರ, ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ನಡೆಯಿತು. ಸಮರ್ಪಕ ಮಾಹಿತಿ ಕೊಟ್ಟಿಲ್ಲ ಎಂದು ಆಕ್ಷೇಪಿಸಿ ಕಾಂಗ್ರೆಸ್ ಯುವ ಘಟಕದ ಕಾರ್ಯಕರ್ತರು, ಕಚೇರಿಯಲ್ಲಿ ಕಾಯಿಪಲ್ಲೆ ಸುರಿದು, ಬಾಯಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ಮಾಡಿದರು.
ಹಲವು ಬಾರಿ ಮಾಲಕರಡ್ಡಿ ಎಂಬ ಆಕ್ಷೇಪವೂ ಕೇಳಿಸಿತು. `ಬುಡ್ಡೆ ಕೋ ಹಠಾವೋ, ಕಾಂಗ್ರೆಸ್ ಕೋ ಬಚಾವೋ' ಎಂದು ಯುವ ಕಾಂಗ್ರೆಸ್ಸಿಗರು ಘೋಷಣೆ ಕೂಗಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಚೆನ್ನಾರಡ್ಡಿ ಪಾಟೀಲ ತುನ್ನೂರ, ಶಾಸಕ ಡಾ.ಎ.ಬಿ. ಮಾಲಕರಡ್ಡಿ ಹಾಗೂ ಮೌಲಾಲಿ ಅನಪೂರ ಬೆಂಬಲಿಗರು ತಮ್ಮ ನಾಯಕರ ಪರ ಜಯಕಾರ ಕೂಗಿದರು. ಕಾರ್ಯಕರ್ತರ ಮಧ್ಯೆ ಹೊಡೆದಾಟವೂ ನಡೆಯಿತು.
ನಂತರ ಗುರುಮಠಕಲ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ಹಾಗೂ ಹೊಡೆದಾಟ ಜರುಗಿತು. ಶಾಸಕ ಬಾಬುರಾವ ಚಿಂಚನಸೂರಗೆ ಟಿಕೆಟ್ ಕೊಡಬಾರದೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಯಿಬಣ್ಣ ಬೋರಬಂಡಾ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಲಕ್ಷ್ಮಾರಡ್ಡಿ ಅನಪೂರ ನೇತೃತ್ವದಲ್ಲಿ ಕಾರ್ಯಕರ್ತರು ಆಗ್ರಹಿಸಿದರು. ಆಗ ಕೆರಳಿದ ಇನ್ನೊಂದು ಗುಂಪಿನ ಕಾರ್ಯಕರ್ತರು ಹಲ್ಲೆ ಮಾಡಿದರು. ಕೆಲವರು ಕುರ್ಚಿಯನ್ನೇ ಎತ್ತಿ ಬಡಿಯಲು ಮುಂದಾದರು.