ಬೆಂಗಳೂರು: ಶ್ರೀನಿವಾಸರಾಜು ಅವರ ನಿರ್ದೇಶನದ ಚಿತ್ರಕ್ಕೆ `ವೀರ ಬಸವಣ್ಣ' ಶೀರ್ಷಿಕೆ ನೀಡದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸೂಚಿಸಲಾಗುವುದು' ಎಂದು ಸಭಾನಾಯಕರೂ ಆಗಿರುವ ಸಚಿವ ಎಸ್.ಆರ್. ಪಾಟೀಲ ವಿಧಾನ ಪರಿಷತ್ನಲ್ಲಿ ಗುರುವಾರ ಪ್ರಕಟಿಸಿದರು.
ವಿರೋಧ ಪಕ್ಷದ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ ಅವರು ಶೂನ್ಯವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದರು. `ಕೈಯಲ್ಲಿ ಖಡ್ಗ ಹಿಡಿದ ವ್ಯಕ್ತಿ ಹಿಂಸೆಗೆ ಇಳಿದಿರುವ ಪೋಸ್ಟರ್ ಮೇಲೆ ವೀರ ಬಸವಣ್ಣ ಶೀರ್ಷಿಕೆ ಹಾಕಿರುವುದು ಬಸವಣ್ಣನವರಿಗೆ ಮಾಡಿದ ಅಪಮಾನ' ಎಂದು ಶಿವಯೋಗಿ ಸ್ವಾಮಿ ದೂರಿದರು.
`ಬಸವಣ್ಣನವರ ಅನುಯಾಯಿಗಳ ಮನಸ್ಸಿಗೆ ಇದರಿಂದ ನೋವಾಗಿದ್ದು, ಪ್ರತಿಭಟನೆಗೂ ಇಳಿದಿದ್ದಾರೆ. ಚಿತ್ರಕ್ಕೆ ಆ ಶೀರ್ಷಿಕೆ ನೀಡದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು.
`ಬಸವಣ್ಣನವರು ನಾಡು ಕಂಡ ಮಹಾನ್ ಸಮಾಜ ಸುಧಾರಕರು. 12ನೇ ಶತಮಾನದಲ್ಲೇ ಸಮಾನತೆಯನ್ನು ಪ್ರತಿಪಾದಿಸಿದ ವಿಭೂತಿ ಪುರುಷರು. ಅವರ ಹೆಸರಿಗೆ ಅಗೌರವ ತರುವಂತಹ ಯತ್ನವನ್ನು ಸರ್ಕಾರ ಸಹಿಸುವುದಿಲ್ಲ. ಚಿತ್ರಕ್ಕೆ ವೀರ ಬಸವಣ್ಣ ಎಂಬ ಹೆಸರು ಇಡಲು ಅವಕಾಶ ಕೊಡದಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸೂಚನೆ ನೀಡಲಾಗುವುದು' ಎಂದು ಸಚಿವರು ಉತ್ತರಿಸಿದರು.
`ವೀರಶೈವ ಸಂಘಟನೆಗಳು ಶುಕ್ರವಾರ ನಡೆಸಲು ಉದ್ದೇಶಿಸಿರುವ ಬಸವಕಲ್ಯಾಣ ಬಂದ್ ಚಳವಳಿಯನ್ನು ಹಿಂದಕ್ಕೆ ಪಡೆಯಬೇಕು' ಎಂದು ಮನವಿ ಮಾಡಿದರು.