ವಿಜಯಪುರ: ಇಲ್ಲಿಗೆ ಸಮೀಪದ ಯಲಿಯೂರು ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ವೀರಣ್ಣಸ್ವಾಮಿ ಅವರ ಜಾತ್ರಾ ಮಹೋತ್ಸವವು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಆ ಪ್ರಯುಕ್ತ ಬೆಳಿಗ್ಗೆಯಿಂದಲೇ ದೇವತಾಕಾರ್ಯಗಳು ನಡೆದವು. ಗ್ರಾಮಸ್ಥರಿಂದ ಆರತಿ ಬೆಳಗುವ ಕಾರ್ಯಕ್ರಮ, ಹರಿಸೇವೆ, ಗ್ರಾಮಸ್ಥರು ಹಾಸಿದ ಮಡಿಬಟ್ಟೆಯ ಮೇಲೆ ವಿಗ್ರಹವನ್ನು ಹೊತ್ತು ಗ್ರಾಮದಲ್ಲಿ ಮೆರವಣಿಗೆ ನಡೆಯಿತು.
ದೇವಾಲಯದಿಂದ ಹೊರಬಂದ ಉತ್ಸವವು ದೇವಾಲಯದ ಪ್ರಾಂಗಣದಲ್ಲಿ ಭಜನೆ, ತಮಟೆ ವಾದ್ಯ ಮತ್ತು ಡೋಲು ವಾದ್ಯದ ತಾಳಕ್ಕೆ ಹೆಜ್ಜೆ ಹಾಕಿ ನರ್ತಿಸುವುದನ್ನು ಭಕ್ತರು ಕಣ್ಣಾರೆ ಕಂಡು ಮನತುಂಬಿಕೊಂಡರು. ನಂತರ ದೇವಾಲಯದ ಹೊರಗೆ ಮೂಲೆಯಲ್ಲಿರುವ ಸೂಳೆಕಲ್ಲಿನ ಮೇಲೆ ನಿಂತು ಗ್ರಾಮವನ್ನು ವೀಕ್ಷಿಸುವ ದೃಶ್ಯಕ್ಕೆ ಭಕ್ತರು ಸಾಕ್ಷಿಯಾದರು. ಹರಿಸೇವೆಯ ಮೂಲಕ ಮೇಕೆ. ಕುರಿಗಳನ್ನು ದೇವರಿಗೆ ಸಮರ್ಪಿಸಿ ಹರಕೆ ತೀರಿಸುವ ಪದ್ಧತಿ ರೂಢಿ ಯಲ್ಲಿದೆ.
10 ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಯಲಿಯೂರು ಗ್ರಾಮದ ಸುತ್ತಲಿನ ಏಳೂರುಗಳಾದ ಚಿಕ್ಕತತ್ತಮಂಗಲ, ದೊಡ್ಡತತ್ತಮಂಗಲ, ತಮ್ಮೇನಹಳ್ಳಿ, ರಾಮನಹಳ್ಳಿ ಮತ್ತು ರಾಮನಹಳ್ಳಿ ಖಾನಿ, ಹಳಿಯೂರು ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು.