ಮುಡಿಪು: ಮಹಿಳೆಯರ ಪ್ರತಿಭೆ, ಸಾಮರ್ಥ್ಯವನ್ನು ಸಮಾಜದಲ್ಲಿ ಜರುಗುವ ವಿವಿಧ ಕ್ಷೇತ್ರ ವ್ಯಾಪ್ತಿಯಲ್ಲಿ ಸಮಗ್ರವಾಗಿ ಬಳಸಿಕೊಂಡರೆ ವೀರರಾಣಿಯ ಆದರ್ಶಯುತ, ಸಾಹಸಯುತ ಜೀವನವನ್ನು ಮೈಗೂಡಿಸಿಕೊಳ್ಳಲು ಸಾಧ್ಯ ಎಂದು ಅಂತರರಾಷ್ಟ್ರೀಯ ಕ್ರೀಡಾಪಟು ಲಲಿತಾ ಜಯರಾಮ್ ಇರಾ ಅಭಿಪ್ರಾಯ ಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಇದೇ 29 ಮತ್ತು 30 ರಂದು ಅಸೈಗೋಳಿಯಲ್ಲಿ ವೀರರಾಣಿ ಅಬ್ಬಕ್ಕ ಉತ್ಸವದ ಪೂರ್ವಭಾವಿಯಾಗಿ ಭಾನುವಾರ ಅಸೈಗೋಳಿಯ ಕೆ.ಎಸ್.ಆರ್.ಪಿ ಮೈದಾನದಲ್ಲಿ ಆಯೋಜಿಸಲಾದ ರಾಣಿ ಅಬ್ಬಕ್ಕ ಕ್ರೀಡೋತ್ಸವ-2011ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಮಹಿಳಾ ಶಕ್ತಿಯ ಸಾಂಘಿಕ ಪ್ರದರ್ಶನ ಸರ್ವಕ್ಷೇತ್ರದಲ್ಲೂ ನಡೆದರೆ ಮಹಿಳಾ ಜಾಗೃತಿ ಇನ್ನಷ್ಟು ಬೆಳೆಯಲು ಸಾಧ್ಯ ಎಂದರು.ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ನಟ, ನಾಟಕಕಾರ ಕೆ.ಎನ್. ಟೇಲರ್ ‘ ಸ್ವಾತಂತ್ರ್ಯ ಸೇನಾನಿಗಳ ಕುರಿತಾಗಿ ನಾಡಿನ ಜನತೆಗೆ ಸಮಗ್ರ ಪರಿಚಯ ನೀಡುವ ನಾಟಕ ಸೇರಿದಂತೆ ವಿವಿಧ ಕಲಾಪ್ರಕಾರಗಳ ಮೂಲಕ ಜನಜಾಗೃತಿ ಮೂಡಿಸಬೇಕು’ ಎಂದರು.
ಮಾಜಿ ಶಾಸಕರಾದ ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಯು.ಟಿ. ಖಾದರ್, ದಿನಕರ್ ಉಳ್ಳಾಲ್, ಹಿರಿಯ ಮುಖಂಡರಾದ ರಘುರಾಮ ಕಾಜವ, ಸಂತೋಷ್ ಕುಮಾರ್ ಶೆಟ್ಟಿ, ಸೀತಾರಾಮ ಶೆಟ್ಟಿ ದಡಸ್, ಸಂಕಪ್ಪ ಕರ್ಕೇರ, ಚಂದ್ರಹಾಸ ಅಡ್ಯಂತಾಯ, ನಮಿತಾ ಶ್ಯಾಮ್, ಪ್ರಮಿತಾ ಮೆಂಡೋನ್ಸಾ, ಭಾಸ್ಕರ ರೈ ಕುಕ್ಕುವಳ್ಳಿ ಇದ್ದರು.