ಬೆಂಗಳೂರು: ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಚುನಾವಣೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆ ಬಣ ಎಲ್ಲಾ ಒಂಬತ್ತು ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದು, ಅಧ್ಯಕ್ಷರಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಎನ್. ತಿಪ್ಪಣ್ಣ ಆಯ್ಕೆಯಾಗಿದ್ದಾರೆ.
ಸದಾಶಿವನಗರದ ವೀರಶೈವ ಲಿಂಗಾಯತ ಭವನದಲ್ಲಿ ಭಾನುವಾರ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತಿಪ್ಪಣ್ಣ ಅವರು 40 ಮತಗಳ ಅಂತರದಿಂದ ಜಯ ಗಳಿಸಿದರು. 175 ಮತದಾರರ ಪೈಕಿ 136 ಮಂದಿ ಮತ ಚಲಾಯಿಸಿದ್ದರು. ತಿಪ್ಪಣ್ಣ ಅವರಿಗೆ 86, ನಿವೃತ್ತ ಅಧಿಕಾರಿ ನಾಗೇಂದ್ರ ಅವರಿಗೆ 46 ಮತಗಳು ಲಭಿಸಿವೆ. ಶಾಸಕ ಚಂದ್ರಕಾಂತ ಬೆಲ್ಲದ ಅವರು ಮೂರು ಮತಗಳನ್ನು ಮಾತ್ರ ಗಳಿಸಿ ಹೀನಾಯವಾಗಿ ಸೋಲು ಕಂಡರು.
ಒಂದು ಮತ ಅಸಿಂಧುವಾಗಿತ್ತು. ಉಪಾಧ್ಯಕ್ಷರಾಗಿ ಎಸ್.ಬಿ. ಅಮರಖೇಡ್ ರಾಯಚೂರು, ಬೆಳಗಾವಿಯ ವೈ.ಎಸ್.ಪಾಟೀಲ್, ಚಾಮರಾಜನಗರದ ಕೆ.ಎಸ್.ನಾಗರಾಜಪ್ಪ, ಬೀದರ್ನ ಗಂಗಾಂಬಿಕ ಪಾಟೀಲ್, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಸ್.ವಾಗೀಶ್ ಪ್ರಸಾದ್, ಕಾರ್ಯದರ್ಶಿಗಳಾಗಿ ತುಮಕೂರಿನ ನಟರಾಜ ಸಾಗರಹಳ್ಳಿ, ಬಾಗಲಕೋಟೆಯ ಸಿ.ಗಂಗಾಧರ ಷಣ್ಮುಖಪ್ಪ ನರೇಗಲ್ಲ, ಕೋಶಾಧ್ಯಕ್ಷರಾಗಿ ಎಂ.ಎಸ್.ಆರ್.ಆರಾಧ್ಯ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಜಂಟಿ ರಿಜಿಸ್ಟ್ರಾರ್ ಸಿ.ಬಿ. ವೀರೇಶ್ ಕಾರ್ಯನಿರ್ವಹಿಸಿದ್ದರು. 6 ತಿಂಗಳ ಹಿಂದೆ ಸರ್ಕಾರ ಆಡಳಿತಾಧಿಕಾರಿಯಾಗಿ ನೇಮಿಸಿತ್ತು.