ಮುಂಬೈ (ಪಿಟಿಐ): `ವೀರೇಂದ್ರ ಸೆಹ್ವಾಗ್ ಹಾಗೂ ಜಹೀರ್ ಖಾನ್ ಅವರನ್ನು ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ತಂಡದಿಂದ ಕೈಬಿಟ್ಟಿಲ್ಲ. ಅಗತ್ಯವಿದ್ದ ಕಾರಣ ಅವರಿಗೆ ವಿಶ್ರಾಂತಿ ನೀಡಲಾಗಿದೆ~ ಎಂದು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಕೆ. ಶ್ರೀಕಾಂತ್ ಸ್ಪಷ್ಟಪಡಿಸಿದ್ದಾರೆ.
`ವೀರೂ~ ಮತ್ತು `ಜಾಕ್~ಗೆ ವಿಶ್ರಾಂತಿ ಅಗತ್ಯವಿದೆ ಎಂದು ಫಿಸಿಯೋ ತಿಳಿಸಿದ್ದರು. ವೈದ್ಯಕೀಯ ವರದಿಗಳು ಸಹ ಅದನ್ನೇ ಹೇಳಿವೆ. ಆದ್ದರಿಂದ 15 ಸದಸ್ಯರನ್ನೊಳಗೊಂಡ ಭಾರತ ತಂಡಕ್ಕೆ ಆಯ್ಕೆ ಮಾಡಿಲ್ಲ~ ಎಂದು ತಿಳಿಸಿದರು.
ಈ ಮೂಲಕ ಅವರನ್ನು ತಂಡದಿಂದ ಕೈ ಬಿಡಲಾಗಿದೆ ಎನ್ನುವ ಉಹಾಪೋಹಕ್ಕೂ ಅವರು ತೆರೆ ಎಳೆದರು.
`ಈ ಟೂರ್ನಿಗೆ ಆಯ್ಕೆ ಮಾಡಿರುವ ತಂಡ ಉತ್ತಮವಾಗಿದೆ. ಆಟಗಾರರ ಫಿಟ್ನೆಸ್ ಹಾಗೂ ಇತರೆ ಅಂಶಗಳನ್ನು ಗಮನಕ್ಕೆ ತಗೆದುಕೊಂಡು ಆಯ್ಕೆ ಮಾಡಲಾಗಿದೆ~ ಎಂದೂ ಅವರು ಹೇಳಿದರು.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಸೆಹ್ವಾಗ್ ಕಳಪೆ ಪ್ರದರ್ಶನ ನೀಡಿದ್ದಾರೆ. ತ್ರಿಕೋನ ಏಕದಿನ ಸರಣಿಯ ಐದು ಪಂದ್ಯಗಳಿಂದ ಕೇವಲ 65 ರನ್ ಗಳಿಸಿದ್ದಾರೆ. ಇದರಿಂದ 13ರಷ್ಟು ಮಾತ್ರ ಸರಾಸರಿ ಹೊಂದಿದ್ದಾರೆ. ನಾಲ್ಕು ಪಂದ್ಯಗಳನ್ನು ಆಡಿರುವ ಎಡಗೈ ವೇಗಿ ಜಹೀರ್ ಐದು ವಿಕೆಟ್ ಮಾತ್ರ ಪಡೆದಿದ್ದಾರೆ. ಆದ್ದರಿಂದ ಈ ಟೂರ್ನಿಗೆ ಅವರನ್ನು ತಂಡದಿಂದ ಕೈ ಬಿಡಲಾಗಿದೆಯೇ ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲು ಶ್ರೀಕಾಂತ್ ನಿರಾಕರಿಸಿದರು.
`ಈ ಬಗ್ಗೆ ನಾನೇನೂ ಹೇಳಲಾರೆ. ವೈದ್ಯಕೀಯ ವರದಿಯನ್ನು ಆಧರಿಸಿ ತಂಡವನ್ನು ಆಯ್ಕೆ ಮಾಡಿದ್ದೇನೆ. ಪದೇ ಪದೇ ಇದೇ ಪ್ರಶ್ನೆ ಕೇಳಿದರೂ ನನ್ನ ಉತ್ತರ ಬದಲಾಗುವುದಿಲ್ಲ~ ಎಂದು ಅವರು ಹೇಳಿದರು.