ಬಳ್ಳಾರಿ: ಪಿಯುಸಿ ದ್ವಿತೀಯ ವಿಜ್ಞಾನ ವಿಷಯದ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣಕ್ಕಾಗಿ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಜಿಲ್ಲೆಯಲ್ಲಿ ಸೋಮವಾರ ಸುಗಮವಾಗಿ ಆರಂಭವಾಗಿದೆ.ಜಿಲ್ಲೆಯ ಒಟ್ಟು 9 ಕೇಂದ್ರಗಳಲ್ಲಿ ಪರೀಕ್ಷೆ ಆರಂಭವಾಗಿದ್ದು, ಬೆಳಿಗ್ಗೆ ಜೀವ ಶಾಸ್ತ್ರ ಹಾಗೂ ಮಧ್ಯಾಹ್ನ ಗಣಿತ ವಿಷಯದ ಪರೀಕ್ಷೆ ನಡೆಯಿತು. ಎಲ್ಲಿಯೂ ಪರೀಕ್ಷಾರ್ಥಿಗಳಿಗೆ ಸಮಸ್ಯೆ ಎದುರಾದ ವರದಿಯಾಗಿಲ್ಲ.
ಜೀವಶಾಸ್ತ್ರ ವಿಷಯದ ಪರೀಕ್ಷೆಗಾಗಿ ಜಿಲ್ಲೆಯಲ್ಲಿ ಒಟ್ಟು 4301 ವಿದ್ಯಾರ್ಥಿ ಗಳು ಪರೀಕ್ಷೆಗೆ ನೋಂದಣಿ ಮಾಡಿ ಸಿದ್ದು, ಆ ಪೈಕಿ 3091 ಜನ ವಿದ್ಯಾರ್ಥಿ ಗಳು ಪರೀಕ್ಷೆಗೆ ಹಾಜರಾದರು.ಗಣಿತ ವಿಷಯದ ಪರೀಕ್ಷೆಗಾಗಿ ನೋಂದಣಿಯಾಗಿದ್ದ 4306 ವಿದ್ಯಾರ್ಥಿ ಗಳ ಪೈಕಿ 3929 ಜನ ಹಾಜರಾದರು.
ಮಂಗಳವಾರ ಬೆಳಿಗ್ಗೆ ಭೌತಶಾಸ್ತ್ರ ಹಾಗೂ ಮಧ್ಯಾಹ್ನ ರಸಾಯನ ಶಾಸ್ತ್ರ ವಿಷಯದ ಪರೀಕ್ಷೆಗಳು ನಡೆಯಲಿವೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮ ಮೂರ್ತಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.
ಬಳ್ಳಾರಿಯ ಮುನ್ಸಿಪಲ್ ಕಾಲೇಜು, ವಾರ್ಡ್ಲಾ ಕಾಲೇಜು, ಎಸ್.ಜಿ. ಕಾಲೇಜು, ಅಲ್ಲಂ ಸುಮಂಗಲಮ್ಮ ಮಹಿಳಾ ಕಾಲೇಜು, ವೀರಶೈವ ಕಾಲೇಜು, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು, ಹೊಸಪೇಟೆಯ ಚಿತ್ತವಾಡಗಿಯ ಸರ್ಕಾರಿ ಪದವಿಪೂರ್ವ ಕಾಲೇಜು, ವಿಜಯನಗರ ಕಾಲೇಜು, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜುಗಳಲ್ಲಿ ಪರೀಕ್ಷೆಗಳು ನಡೆದಿವೆ.