ಕೋಲಾರ: ಮನೆ ನಿರ್ವಹಣೆ ಮಾಡುವ ಮಹಿಳೆಯರು ವೃತ್ತಿಕೌಶಲ್ಯ ರೂಢಿಸಿಕೊಳ್ಳಲು ಯತ್ನಿಸಬೇಕು ಎಂದು ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಬಿ.ಮರಿಸ್ವಾಮಿ ಸಲಹೆ ನೀಡಿದರು.
ನಗರದ ಗಲ್ಪೇಟೆಯಲ್ಲಿರುವ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಮಂಗಳವಾರ ಜಿಲ್ಲಾ ನೆಹರು ಯುವ ಕೇಂದ್ರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಚಾಮುಂಡೇಶ್ವರಿ ಮಹಿಳಾ ಮಂಡಳಿ ಆಶ್ರಯದಲ್ಲಿ ಏರ್ಪಡಿಸಿದ್ದ ಕೌಶಲ್ಯ ಅಭಿವೃದ್ಧಿ ದಿನಾಚರಣೆ ಮತ್ತು ಸ್ವಾಮಿ ವಿವೇಕಾನಂದರ 149ನೇ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.
ಮಹಿಳೆಯರ ಬಗೆಗಿನ ಸಮಾಜದ ನೋಟ-ನಿಲುವು ಬದಲಾಗುತ್ತಿವೆ. ಬದಲಾದ ಕಾಲಮಾನದಲ್ಲಿ ದೊರಕುವ ವಿಶೇಷ ಅನುಕೂಲ ಬಳಸಿಕೊಂಡು ಮಹಿಳೆಯರು ಕೌಶಲ ಹೆಚ್ಚಿಸಿಕೊಳ್ಳಬೇಕು ಎಂದರು.
ಸ್ವಾಮಿ ವಿವೇಕಾನಂದರ ಚಿಂತನೆಯನ್ನು ಎಲ್ಲರೂ ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕು ಇನ್ನಷ್ಟು ಉತ್ತಮವಾಗುತ್ತದೆ. ಸಮಾಜದ ಆರೋಗ್ಯವೂ ಸುಸ್ಥಿರಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.
ಜಿ.ಪಂ. ಸದಸ್ಯೆ ಮಂಗಮ್ಮ ಮುನಿಸ್ವಾಮಿ ಉದ್ಘಾಟಿಸಿದರು. ಮಂಡಳಿಯ ಜಯಲಕ್ಷ್ಮೀ, ಮಂಜುನಾಥ, ನಗರಸಭೆ ಸದಸ್ಯ ರೌತ್ ಶಂಕರಪ್ಪ, ರಾಮಮೂರ್ತಿ, ಸೊಣ್ಣೇಗೌಡ, ಸಾವಯವ ಕೃಷಿಕ ತ್ಯಾಗರಾಜು ವೇದಿಕೆಯಲ್ಲಿದ್ದರು.