ಬಳ್ಳಾರಿ: ಕಳೆದ 40 ವರ್ಷಗಳಿಂದ ಪ್ರಸಾದನ ಕಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ರಂಗಭೂಮಿ ಕಲಾವಿದ ವೆಂಕಟೇಶ ಅವರನ್ನು ಪ್ರಸಕ್ತ ಸಾಲಿನ ಧರ್ಮಾವರಂ ರಾಮಕೃಷ್ಣಮಾಚಾರ್ಯ (ಡಿಆರ್ಕೆ) ರಂಗಸಿರಿ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಘವ ಮೆಮೋರಿಯಲ್ ಅಸೋಸಿಯೇಶನ್ನ ಅಧ್ಯಕ್ಷ ಕೆ.ಚೆನ್ನಪ್ಪ, ಪ್ರಸಾದನ ಕಲೆಯಲ್ಲಿನ ಇವರ ವಿಶೇಷ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಇದೇ 21ರಂದು ಸಂಜೆ 6.30ಕ್ಕೆ ರಾಘವ ಕಲಾಮಂದಿರದಲ್ಲಿ ನಡೆಯಲಿರುವ ಧರ್ಮಾವರಂ ರಾಮಕೃಷ್ಣಮಾಚಾರ್ಯ ಅವರ ಪುಣ್ಯಸ್ಮರಣೆಯ ಶತಮಾನೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
`ಆಂಧ್ರ ನಾಟಕ ಪಿತಾಮಹ' ಎಂದು ಖ್ಯಾತರಾಗಿರುವ ಧರ್ಮಾವರಂ ರಾಮ ಕೃಷ್ಣಮಾಚಾರ್ಯ ಅವರು 1912ರಲ್ಲೇ ನಿಧನರಾಗಿದ್ದು, ಅವರ ಪುಣ್ಯಸ್ಮರಣೆಯ ಶತಮಾನೋತ್ಸವದ ಅಂಗವಾಗಿ ಅವರು ರಚಿಸಿರುವ `ಭಕ್ತಪ್ರಹ್ಲಾದ' ಕನ್ನಡ ನಾಟಕವನ್ನು ಮರು ಮುದ್ರಿಸಲಾಗಿದ್ದು, ಇದೇ ವೇಳೆ ಅದರ ಬಿಡುಗಡೆಯೂ ನಡೆಯಲಿದೆ.