ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ: ಅತಿಥಿ ಉಪನ್ಯಾಸಕರ ಮನವಿ

Last Updated 24 ಅಕ್ಟೋಬರ್ 2011, 10:55 IST
ಅಕ್ಷರ ಗಾತ್ರ

ಬಳ್ಳಾರಿ: ವಿವಿಧ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಪ್ರತಿ ತಿಂಗಳೂ ವೇತನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇತ್ತೀಚೆಗೆ ಮನವಿ ಸಲ್ಲಿಸಿದೆ.

ರಾಜ್ಯ ಸರ್ಕಾರ ಇವರನ್ನು ನೇಮಕ ಮಾಡಿಕೊಂಡಿದೆ. ನಿಗದಿತ ಅವಧಿಯಲ್ಲಿ ವೇತನ ನೀಡದೆ, ತಮ್ಮನ್ನು ಕೀಳಾಗಿ,  ಕಾಣಲಾಗುತ್ತಿದೆ ಎಂದು ಜಿಲ್ಲೆಯ ವಿವಿಧೇಡೆ ಕೆಲಸ ಮಾಡುತ್ತಿರುವ 20ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಆರೋಪಿಸಿದರು.

ಸ್ನಾತಕೋತ್ತರ ಪದವಿ, ಎಂ.ಫಿಲ್, ಪಿಎಚ್.ಡಿ, ಎನ್‌ಇಟಿ, ಎಸ್‌ಎಲ್‌ಇಟಿ ಪರೀಕ್ಷೆ ಉತ್ತೀರ್ಣರಾಗಿ, ಸೇವಾ ಹಿರಿತನ ಹೊಂದಿದ್ದರೂ ಕಾಲೇಜು ಗಳಲ್ಲಿ ಆಯಾ ತಿಂಗಳು ವೇತನ  ನೀಡದ  ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಅತಿಥಿ ಉಪನ್ಯಾಸಕರನ್ನು ಜೀತದಾಳುಗಳ ರೀತಿ ದುಡಿಸಿಕೊಳ್ಳುತ್ತಿದೆ ಎಂದು ಅವರು ದೂರಿದರು.

ವರ್ಷಕ್ಕೊಮ್ಮೆಯಂತೆಯೂ ಸಂಬಳ ನೀಡಲಾಗುತ್ತಿಲ್ಲ. ಕಾಯಂ ಉಪನ್ಯಾಸಕರ ರೀತಿ ಅರ್ಹತೆ, ಅನುಭವ ಹೊಂದಿ, ಪಾಠ ಮಾಡುತ್ತಿದ್ದರೂ, ಅತಿಥಿ ಉಪನ್ಯಾಸಕರನ್ನು  ಕಡೆಗಣಿಸುತ್ತಿದೆ ಎಂದು ಅವರು ತಿಳಿಸಿದರು.
ಉನ್ನತ ಶಿಕ್ಷಣ ಸಚಿವರು ಅತಿಥಿ ಉಪನ್ಯಾಸಕರ ಸಂಬಳ ಬಿಡುಗಡೆ ಮಾಡಿ ಆದೇಶ ಹೊರಡಿಸಬೇಕು.

ಸೇವೆಯನ್ನು ಕಾಯಂಗೊಳಿಸಬೇಕು. ಯುಜಿಸಿ ನಿಯಮಾವಳಿ ಪ್ರಕಾರ ರೂ 15ರಿಂದ 20 ಸಾವಿರ ಸಂಬಳ ನಿಗದಿಪಡಿಸಬೇಕು. ಅತಿಥಿ ಉಪನ್ಯಾಸಕರನ್ನು ಶೈಕ್ಷಣಿಕ ವರ್ಷದ ಮಧ್ಯೆ ಯಾವುದೇ ಕಾರಣಕ್ಕೂ ವಜಾ ಮಾಡಬಾರದು. ಸೇವಾ ಹಿರಿತನ ಹೊಂದಿದ ಅತಿಥಿ ಉಪನ್ಯಾಸಕರ ಸೇವೆ ಮುಂದುವರಿಸಬೇಕು.
 
ರಜೆ ಸೌಲಭ್ಯ ನೀಡಬೇಕು. ತಾರತಮ್ಯ ಮಾಡದೆ ಅತಿಥಿ ಉಪನ್ಯಾಸಕರನ್ನು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ  ತಿಳಿಸಲಾಗಿದೆ.

ಸಂಘದ ಟಿ.ದುರುಗಪ್ಪ, ಡಾ.ಕುಮಾರಸ್ವಾಮಿ, ಡಾ.ಶಾಂಮೂರ್ತಿ, ಡಾ.ಕೆ.ಬಸಪ್ಪ, ಡಾ.ಎಚ್. ಹನುಮಂತರಾಯ, ಸಿದ್ದೇಶ್, ಮುತ್ತಪ್ಪ, ಬಸವರಾಜು, ಸುರೇಶ್ ನಾಯ್ಕ, ಮೇಘರಾಜ್, ಪಿ.ಶ್ರೀನಿವಾಸರೆಡ್ಡಿ ಉಪಸ್ಥಿತರಿದ್ದರು.

`ರಕ್ತದಾನದಿಂದ ಜೀವದಾನ~
ಬಳ್ಳಾರಿ:
ರಕ್ತದಾನದಿಂದ ಅಪಘಾತಕ್ಕೆ ಒಳಗಾದವರ ಪ್ರಾಣ ಉಳಿಸಬಹುದಲ್ಲದೆ   ಹೆರಿಗೆ ವೇಳೆ ಗರ್ಭಿಣಿಯರಿಗೆ ರಕ್ತಸ್ರಾವದಿಂದ ಎದುರಾಗುವ ಸಮಸ್ಯೆ ತಡೆಯಬಹುದು ಎಂದು ಎಂ. ಗೋನಾಳ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಆಶಿಯಾ ಬೇಗಂ ತಿಳಿಸಿದರು.

ತಾಲ್ಲೂಕಿನ ಎಂ. ಗೋನಾಳು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವ ಉದ್ದೇಶಿಸಿ ಮಾತನಾಡಿದರು.
ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ರಕ್ತ ನೀಡುವುದರಿಂದ ಜೀವದಾನ ಮಾಡಿದ ಪುಣ್ಯ ಲಭಿಸುತ್ತದೆ ಎಂದು ಅವರು ತಿಳಿಸಿದರು.

ಗ್ರಾ.ಪಂ. ಅಧ್ಯಕ್ಷ ಹೊನ್ನೂರಪ್ಪ  ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷೆ  ಯಂಕಮ್ಮ, ಸದಸ್ಯರಾದ ಶ್ರೀನಿವಾಸ, ಹೊನ್ನೂರಮ್ಮ, ಸುಮಂಗಳಮ್ಮ, ಲಚಮಮ್ಮ, ಹಂಪಮ್ಮ, ಗಾದಿಲಿಂಗಪ್ಪ, ಹನುಮನಗೌಡ, ವೈದ್ಯಾಧಿಕಾರಿಗಳಾದ  ಡಾ. ಉಮೇಶ್ ಕಾಕಂಡಕಿ, ಡಾ. ಅನಿತಾ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT