ಅರಕಲಗೂಡು : ಸೂಕ್ತ ವೇತನ ಪಾವತಿಗೆ ಆಗ್ರಹಿಸಿ ಜಾತಿ ಗಣತಿ ಕಾರ್ಯ ನಡೆಸುತ್ತಿರುವ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಜಾತಿಗಣತಿ ಕಾರ್ಯದ ಹೊಣೆ ಹೊತ್ತಿರುವ ಎನ್.ಜಿ.ಓ. ಸಂಸ್ಥೆ ಗಣತಿ ಕಾರ್ಯ ನಡೆಸಿದ ಕಾರ್ಯಕರ್ತರಿಗೆ ಸೂಕ್ತ ವೇತನ ಪಾವತಿ ಮಾಡುತ್ತಿಲ್ಲ ಎಂದು ಆರೋಪಿಸಿ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿ ಘೋಷಣೆ ಕೂಗಿದರು.
ಸಂಸ್ಥೆಯ ನಿಗದಿತ ದರದಲ್ಲಿ ವೇತನ ನೀಡುತ್ತಿಲ್ಲ, ಗಣತಿ ಕಾರ್ಯಕ್ಕೆ ವ್ಯಕ್ತಿಯೊಬ್ಬನಿಗೆ ತಲಾ ಒಂದು ರೂ.ನಂತೆ ಪಾವತಿ ಮಾಡು ವುದಾಗಿ ಹೇಳುತ್ತಿದೆ. ಬೇರೆ ತಾಲ್ಲೂಕಿನಲ್ಲಿ ಈ ಕಾರ್ಯಕ್ಕೆ ಮೂರರಿಂದ ನಾಲ್ಕು ರೂಪಾಯಿ ನೀಡಲಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ಇಷ್ಟವಿದ್ದರೆ ಕೆಲಸ ಮಾಡಿ ಇಲ್ಲದಿದ್ದರೆ ಬಿಟ್ಟು ಹೋಗಿ ಎಂದು ದಬ್ಬಾಳಿಕೆ ನಡೆಸುತ್ತಾರೆ ಎಂದು ಪ್ರತಿಭಟನಾ ಕಾರರು ಆರೋಪಿಸಿದರು.
ಪದವಿ ತರಗತಿಗಳಿಗೆ ರಜೆ ಇದ್ದ ಕಾರಣ ಗಣತಿ ಕಾರ್ಯಕ್ಕೆ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಕಾರ್ಯಕರ್ತರಿಗೆ ಯಾವುದೆ ಆದೇಶ ಪತ್ರ ನೀಡಿಲ್ಲ, ಅಲ್ಲದೆ ಸೂಕ್ತ ತರಬೇತಿ ನೀಡಿಲ್ಲ. ಮತದಾರರ ಪಟ್ಟಿ ಹಾಗೂ ಪಡಿತರ ಚೀಟಿಯಲ್ಲಿ ಹಲವಾರು ದೋಷಗಳಿದ್ದು, ನಿಖರ ಮಾಹಿತಿ ಪಡೆಯ ಬೇಕಿರುವ ಕಾರಣ ನಿಧಾನ ಗತಿಯಲ್ಲಿ ಕಾರ್ಯ ಸಾಗುತ್ತಿದೆ.
ಪ್ರತಿದಿನ ಹತ್ತು ಮನೆಗಳ ಗಣತಿ ಕಾರ್ಯ ಪುರ್ಣಗೊಳಿಸಲೂ ಸಾಧ್ಯವಾಗುತ್ತಿಲ್ಲ. ಇಷ್ಟೆಲ್ಲಾ ಕಷ್ಟಪಟ್ಟರೂ ವ್ಯಕ್ತಿಯೊಬ್ಬನ ಗಣತಿ ಕಾರ್ಯಕ್ಕೆ ಒಂದು ರೂ ನೀಡುವ ಮೂಲಕ ನಮ್ಮನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಿ ಸರಿಯಾದ ವೇತನ ನೀಡುವವರೆಗೂ ಕೆಲಸ ನಿರ್ವಹಿಸು ವುದಿಲ್ಲ ಹಾಗೂ ಗಣತಿ ಕಾರ್ಯಕ್ಕೆ ನೀಡರುವ ಗಣಕ ಯಂತ್ರವನ್ನು ವಾಪಸ್ಸು ನೀಡುವುದಿಲ್ಲ ಎಂದು ಪಟ್ಟು ಹಿಡಿದರು.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಪ್ರಭಾರ ತಹಶೀಲ್ದಾರ್ ರಂಗರಾಜು ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.