ಇದರಲ್ಲಿ ಮೊದಲ ಐದು ವರ್ಷಗಳ ಸಂಪೂರ್ಣ ವೆಚ್ಚವನ್ನು ಯು.ಜಿ.ಸಿಯೇ ಅಂದರೆ ಕೇಂದ್ರ ಸರ್ಕಾರವೇ ಭರಿಸಲಿದೆ. ರಾಜ್ಯ ಸರ್ಕಾರ ವೇತನಶ್ರೇಣಿಯನ್ನು ಜಾರಿಗೊಳಿಸಿತೇ ಹೊರತು ೨೦೦೬ ರಿಂದ ೨೦೦೯ರ ವರೆಗಿನ ವೇತನಬಾಕಿಯನ್ನು ಇದುವರೆಗೂ ನೀಡಿಲ್ಲ. ರಾಷ್ಟ್ರದ ಬಹುತೇಕ ರಾಜ್ಯಗಳು ಈಗಾಗಲೇ ಈ ವೇತನಬಾಕಿಯನ್ನು ನೀಡಿವೆ. ಕಾಲೇಜು ಶಿಕ್ಷಕರು ಹಿಂದಿನ ಸರ್ಕಾರಕ್ಕೆ ಮತ್ತು ಈಗಿನ ಸರ್ಕಾರಕ್ಕೆ ಹಲವಾರು ಮನವಿಗಳನ್ನು ಸಲ್ಲಿಸಿದಾಗ್ಯೂ ರಾಜ್ಯ ಸರ್ಕಾರ ಏನೇನೋ ಕುಂಟುನೆಪಗಳನ್ನು ಹೇಳುತ್ತ ವೇತನಬಾಕಿಯನ್ನು ನೀಡದೆ ಸತಾಯಿಸುತ್ತ ಬಂದಿರುವುದು ಏಕೆಂದೇ ಅರ್ಥವಾಗುತ್ತಿಲ್ಲ.
ಕೇಂದ್ರ ಸರ್ಕಾರ ಆ ಸಮಸ್ತ ವೆಚ್ಚವನ್ನು ಕೂಡಲೇ ತುಂಬಿಕೊಡುತ್ತದಾದ ಕಾರಣ ಇದರಲ್ಲಿ ರಾಜ್ಯ ಸರ್ಕಾರ ಕಳೆದುಕೊಳ್ಳುಂಥದ್ದು ಏನೂ ಇಲ್ಲ. ಬದಲಿಗೆ ಯಾವ ಸದುದ್ದೇಶದಿಂದ ಇದನ್ನು ಕೇಂದ್ರ ಜಾರಿಗೊಳಿಸಿದೆಯೋ ಅದನ್ನು ತಾನೂ ಜಾರಿಗೊಳಿಸಿದ ಕೀರ್ತಿ ಗಳಿಸುವುದರ ಜೊತೆಗೆ ವಿಶ್ವವಿದ್ಯಾ ಲಯ ಮತ್ತು ಕಾಲೇಜು ಶಿಕ್ಷಕರ ವಿಶ್ವಾಸವನ್ನು ಗಳಿಸುವುದು ಅಷ್ಟೇ. ಆದ್ದರಿಂದ ಕೇಂದ್ರದ ದೇವರು ವರ ಕೊಟ್ಟ ಮೇಲೂ ರಾಜ್ಯ ಸರ್ಕಾರ, ವರ ಕೊಡದಿರುವ ಪೂಜಾರಿ ಆಗದಿರಲೆಂದು ಆಶಿಸುತ್ತೇನೆ.
–ಡಾ. ಆರ್. ಲಕ್ಷ್ಮೀನಾರಾಯಣ, ಬೆಂಗಳೂರು.