ಬೆಂಗಳೂರು: `ಭಾರತೀಯ ಸಂಸ್ಕೃತಿಯ ಅಡಿಗಲ್ಲಿನಂತಿರುವ ವೇದಗಳು ಎಲ್ಲ ಭಾಷೆಗಳಿಗೂ ತರ್ಜುಮೆಗೊಂಡು ಕಡಿಮೆ ವೆಚ್ಚದಲ್ಲಿ ಸಾಮಾನ್ಯ ಜನರಿಗೆ ದೊರುಕುವಂತಹ ಕಾರ್ಯ ನಡೆಯಬೇಕು~ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಆಶಿಸಿದರು.
ಅರಬಿಂದೋ ಕಪಾಲಿಶಾಸ್ತ್ರಿ ವೇದ ಸಂಸ್ಕೃತಿ ಅಧ್ಯಯನ ಸಂಸ್ಥೆಯು ರಾಜಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಆರ್.ಎಲ್. ಕಶ್ಯಪ್ ಅವರು ಅನುವಾದಿಸಿರುವ `ಅಥರ್ವ ವೇದ~ ಆರು ಸಂಪುಟಗಳನ್ನು ಬಿಡುಗಡೆಮಾಡಿ ಅವರು ಮಾತನಾಡಿದರು.
`ಬೈಬಲ್, ಕುರಾನ್ ಧರ್ಮಗ್ರಂಥಗಳು ಕಡಿಮೆ ವೆಚ್ಚದಲ್ಲಿ ದೊರೆಯುತ್ತಿವೆ. ಅದರಂತೆ ವೇದಗಳು ದೊರೆಯುವಂತಾಗಬೇಕು. ವೇದಗಳ ಬಗ್ಗೆ ತಕಾರಿರಲ್ಲದೇ ಶ್ರೇಷ್ಠ ಗ್ರಂಥವೆಂದು ಇಡೀ ವಿಶ್ವವೇ ಒಪ್ಪಿಕೊಂಡಿದೆ. ಆದರೆ ದೇಶದಲ್ಲಿ ವೇದಗಳನ್ನು ಕ್ರಮಬದ್ದವಾಗಿ ಅಧ್ಯಯನ ಮಾಡಲು ಒಂದು ಸಂಸ್ಥೆಯನ್ನು ಸ್ಥಾಪಿಸಲು ಸಾಧ್ಯವಾಗಿಲ್ಲ~ ಎಂದು ವಿಷಾದ ವ್ಯಕ್ತಪಡಿಸಿದರು.
`ಮೇಲ್ನೊಟಕ್ಕೆ ಕ್ಲಿಷ್ಟವೆನಿಸುವ ವೇದದ ಸಾರ ಜೀವನದ ಪ್ರೀತಿಗೆ ಅತಿ ಹತ್ತಿರವಾಗಿದೆ ಮತ್ತು ಶ್ರೇಷ್ಠವಾದ ಜ್ಞಾನ ನೀಡುತ್ತದೆ. ಮಾತೃ, ಪಿತೃ ಭಕ್ತಿ ಹಾಗೂ ಪ್ರಕೃತಿ ಪ್ರೇಮ ಸೇರಿದಂತೆ ವಿವಿಧ ಸಂಸ್ಕೃತಿಗಳನ್ನು ಹಿಡಿದಿಟ್ಟುಕೊಂಡಿರುವ ವೇದಗಳು ವಿಶ್ವಕ್ಕೆ ಹಿಂದೂ ಧರ್ಮ ನೀಡಿರುವ ಅತಿ ದೊಡ್ಡ ಕೊಡುಗೆ~ ಎಂದು ಅವರು ಶ್ಲಾಘಿಸಿದರು.
ಅನುವಾದಕ ಡಾ.ಆರ್.ಎಲ್. ಕಶ್ಯಪ್, ` ವೇದಗಳು ವ್ಯಕ್ತಿಯಲ್ಲಿ ಪ್ರಶ್ನಿಸುವ ಮನೋಭಾವನ್ನು ಹುಟ್ಟುಹಾಕುವುದಲ್ಲದೇ , ಅದಕ್ಕೆ ಸೂಕ್ತ ಉತ್ತರ ನೀಡುವಲ್ಲಿ ಸಫಲಗೊಂಡಿದೆ. ಬದುಕಿನೆಡೆಗೆ ಇಟ್ಟುಕೊಳ್ಳಬೇಕಾದ ನಂಬಿಕೆ ಮತ್ತು ಆತ್ಮವಿಶ್ವಾಸವನ್ನು ಅನಾಮತ್ತಾಗಿ ವೇದದಿಂದ ಪಡೆಯಬಹುದು~ ಎಂದು ಹೇಳಿದರು.
ರಾಜ್ಯಸಭಾ ಸದಸ್ಯ ಎಂ.ರಾಮಾ ಜೋಯಿಸ್, ಸಂಸ್ಥೆಯ ನಿರ್ವಾಹಕ ಟ್ರಸ್ಟಿ ಡಾ.ಅನಂತ ಅಯ್ಯರ್, ಕಾರ್ಯನಿರ್ವಾಹಕ ಟ್ರಸ್ಟಿ ಡಾ.ರ.ವಿ.ಜಹಾಗೀರದಾರ, ವಿದ್ವಾಂಸ ಪ್ರಕಾಶ್ ವೆಂ.ಕುಲಕರ್ಣಿ ಉಪಸ್ಥಿತರಿದ್ದರು.