ಯಲಹಂಕ: `ವೇಮನ ಮಹರ್ಷಿಗಳು ಕೇವಲ ರೆಡ್ಡಿ ಜನಾಂಗಕ್ಕೆ ಮಾತ್ರ ಸೇರಿದ ವ್ಯಕ್ತಿಯಲ್ಲ. ಅವರು ಎಲ್ಲ ಜನಾಂಗದವರಿಗೂ ಬೇಕಾಗಿರುವ ಮಹಾನ್ ಪುರುಷ~ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದರು.
ರೆಡ್ಡಿ ಜನಸಂಘ ಬೆಂಗಳೂರು ಉತ್ತರ ವಲಯ ಹಾಗೂ ರೆಡ್ಡಿ ಜನಸಂಘ ಯುವಘಟಕದ ಆಶ್ರಯದಲ್ಲಿ ಶೇಷಾದ್ರಿಪುರ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತ್ಯುತ್ಸವ ಸಮಾರಂಭ ವನ್ನುಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜಸೇವಾ ಹಾಗೂ ಧರ್ಮ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಇತರರಿಗಾಗಿ ಸರ್ವವನ್ನೂ ತ್ಯಾಗ ಮಾಡಿದ ಮಹಾನ್ಪುರುಷನ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಭರವಸೆ: ಕ್ಷೇತ್ರ ವ್ಯಾಪ್ತಿಯ ಸಿಂಗನಾಯಕನಹಳ್ಳಿ ಅಥವಾ ಹೊನ್ನೇನಹಳ್ಳಿ ಗ್ರಾಮದಲ್ಲಿ ರೆಡ್ಡಿ ಜನಾಂಗದವರಿಗಾಗಿ ಶಾಲೆ ತೆರೆಯಲು ನಾಲ್ಕು ಎಕರೆ ಜಾಗವನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಶೀಘ್ರದಲ್ಲೆ ಪ್ರಸ್ತಾವನೆ ಸಲ್ಲಿಸಿ, ಜಾಗದ ಮಂಜೂರಾತಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಎಂ.ಎನ್.ರೆಡ್ಡಿ ಅವರು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊ ಳಿಸಲಾಯಿತು. ಸಮುದಾಯದ 12 ಮಂದಿ ಹಿರಿಯರನ್ನು ಸನ್ಮಾನಿಸಲಾಯಿತು.