ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ನೀಲಗಿರಿ ರೆಸಾರ್ಟ್ನಲ್ಲಿ ವೇಶ್ಯಾವಾಟಿಕೆಗೆ ಸಂಬಂಧಿಸಿದಂತೆ 17 ಮಹಿಳೆಯರು ಸೇರಿದಂತೆ 20 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ಮಧ್ಯಾಹ್ನ ಅಂತರರಾಜ್ಯ ವೇಶ್ಯಾವಾಟಿಕೆ ಅಡ್ಡೆ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಜಿಲ್ಲಾ ಗುಪ್ತದಳ ಮತ್ತು ಪಟ್ಟಣ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದರು. ಕೋಲ್ಕತ್ತ ಮೂಲದ ಆಶಾ, ರೇಷ್ಮಾ, ಸೀಮಾ, ಲೋತಿಫ್, ಪೂಜಾ, ಸುಮಿ, ಸವಯ್ಯ, ಫರೀದಾ, ರಾಣಿ, ಶಬಾನಾ, ಕೇರಳ ಮೂಲದ ಸರೀನಾ, ಫಾತೀಮಾ, ಶಿವಪ್ರಭಾ, ಆಂಧ್ರಪ್ರದೇಶ ಮೂಲದ ಆಲಮೇಲು ಮಂಗಮ್ಮ, ನಾಗಲಕ್ಷ್ಮಿ, ತಮಿಳುನಾಡು ಮೂಲದ ಲಕ್ಷ್ಮಿ, ಕರ್ನಾಟಕದ ಕುಂದಗೋಳ ಮೂಲದ ಕಾವ್ಯಾ ಮತ್ತು ದಕ್ಷಿಣ ಕನ್ನಡ ಮೂಲದ ರವಿ, ಸಾಗರದ ಜಗ್ಗ, ಮದ್ದೂರು ತಾಲ್ಲೂಕು ಕೊಪ್ಪ ಗ್ರಾಮದ ಪ್ರಭು ಎಂಬುವವರನ್ನು ಬಂಧಿಸಲಾಗಿದೆ.
ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬಂಧಿತರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುವುದು ಎಂದು ಸರ್ಕಲ್ ಇನ್ಸ್ಪೆಕ್ಟರ್ ಚನ್ನೇಶ್ ಹಾಗೂ ಸಬ್ಇನ್ಸ್ಪೆಕ್ಟರ್ ಎಂ.ನಾಯಕ್ ತಿಳಿಸಿದರು.
ತಾಲ್ಲೂಕಿನಲ್ಲಿ ಇಂತಹ ಅಡ್ಡೆಗಳು ಇನ್ನೂ ಇರಬಹುದು ಎಂಬ ಸಾರ್ವಜನಿಕರ ಸಂದೇಹದ ಹಿನ್ನೆಲೆಯಲ್ಲಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಅಕ್ರಮ ಮದ್ಯ ಮಾರಾಟ: ವೈನ್ಸ್ಟೋರ್ಗೆ ಬೀಗ
ಕೊಳ್ಳೇಗಾಲ: ನಿಯಮ ಬಾಹಿರವಾಗಿ ಮದ್ಯ ಮಾರುತ್ತಿದ್ದ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿಗಳ ಆದೇಶದ ಮೇರೆಗೆ ವೈನ್ಸ್ಟೋರ್ ಮಾಲೀಕ ಮತ್ತು ಸಿಬ್ಬಂದಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ, ವೈನ್ಸ್ಟೋರ್ಗೆ ಅಬಕಾರಿ ಅಧಿಕಾರಿಗಳು ಶನಿವಾರ ಬೀಗ ಜಡಿದಿದ್ದಾರೆ.
ತಾಲ್ಲೂಕಿನ ಸತ್ತೇಗಾಲದಲ್ಲಿರುವ ಸುನಿತಾ ವೈನ್ಸ್ನಲ್ಲಿ ನಿಯಮ ಬಾಹಿರವಾಗಿ ಮದ್ಯಮಾರಾಟ ಮಾಡುತ್ತಿರುವ ದೂರಿನ ಮೇರೆಗೆ ಉಪವಿಭಾಗಾಧಿಕಾರಿ ಎಚ್.ಎನ್.ಸತೀಶ್ಬಾಬು ಶನಿವಾರ ವೈನ್ಸ್ಟೋರ್ಗೆ ಭೇಟಿ ನೀಡಿ ತಪಾಸಣೆ ನಡೆಸಿದರು.
ವೈನ್ಸ್ಟೋರ್ನಲ್ಲಿ ನಿಯಮ ಬಾಹಿರವಾಗಿ ಮದ್ಯ ಮಾರಾಟ ಹಾಗೂ ಮಾರಾಟವಾಗಿರುವ ಮದ್ಯಕ್ಕೆ ನಗದು ರಸೀತಿ ನೀಡದೇ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಕೂಡಲೇ ಅಬಕಾರಿ ಅಧಿಕಾರಿಗಳನ್ನು ಸ್ಥಳಕ್ಕೆ ಬರಮಾಡಿಕೊಂಡು ಮೊಕದ್ದಮೆ ದಾಖಲು ಮಾಡುವಂತೆ ಮತ್ತು ಮುಂದಿನ ಆದೇಶದವರೆಗೆ ಶಾಪ್ಗೆ ಬಾಗಿಲು ಮುಚ್ಚಿಸುವಂತೆ ಆದೇಶಿಸಿದರು.
ಚಿಲ್ಲರೆ ವ್ಯಾಪಾರ ಮಾಡುವವರ ವಿರುದ್ಧ ತಕ್ಷಣವೇ ಕ್ರಮಕೈಗೊಳ್ಳುವಂತೆ ಅಬಕಾರಿ ಅಧಿಕಾರಿಗಳಿಗೆ ಉಪವಿಭಾಗಾಧಿಕಾರಿ ಸೂಚನೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.