ಕಾಪು (ಪಡುಬಿದ್ರಿ): ಇತ್ತೀಚಿನ ದಿನಗಳಲ್ಲಿ ಹಲವು ಕೃಷಿ ಚಟುವಟಿಕೆಗಳು ನಡೆಯುತ್ತಿದ್ದರೂ, ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಇಂದಿಗೂ ವೈಜ್ಞಾನಿಕ ಕೃಷಿ ನಡೆಯುತ್ತಿಲ್ಲ. ಈ ಬಗ್ಗೆ ಇಲ್ಲಿನ ಕೃಷಿಕರು ವಿಶೇಷ ಗಮನ ನೀಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಕೃಷ್ಣ ಸ್ವಾಮಿ ರಾವ್ ಸಲಹೆ ಮಾಡಿದರು.
ಕಾಪು ಸಮೀಪದ ಇನ್ನಂಜೆಯ ಪ್ರಗತಿಪರ ಯುವ ಕೃಷಿಕ ಸುಧಾಕರ ಶೆಟ್ಟಿ ಮಡಂಬು ಅವರು ಬಾರಿಟ್ರಾನ್ಸ್ಪ್ಲಾಂಟರ್ (ಭತ್ತದ ನಾಟಿ ಯಂತ್ರ) ಮೂಲಕ ನೇಜಿ ನಾಟಿ ಮಾಡಿ ಭತ್ತದ ಕೃಷಿಗೆ ಈಚೆಗೆ ಚಾಲನೆ ನೀಡಿ ಮಾತನಾಡಿದರು.
ವೈಜ್ಞಾನಿಕ ಅನ್ವೇಷಣೆಯ ಭತ್ತದ ನಾಟಿ ಯಂತ್ರ, ಪರಿಕರಗಳು ಬಂದು ಸುಮಾರು 10 ವರ್ಷ ಕಳೆದರೂ ಕರಾವಳಿಯಲ್ಲಿ ಬಳಸುತ್ತಿಲ್ಲ. ಸಬ್ಸಿಡಿ ಮೂಲಕ ಯಂತ್ರಗಳನ್ನು ಸರ್ಕಾರ ನೀಡುತ್ತಿದೆ. ಕೃಷಿಕರು ಇದನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಉಡುಪಿ, ಆತ್ಮ ಅನುಷ್ಠಾನ ಸಮಿತಿ ಉಡುಪಿ, ತಾಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಇವರ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು. ರೈತ ಸಂಪರ್ಕ ಕೇಂದ್ರ ಕಾಪು ಅಧಿಕಾರಿ ಕೆ.ತಿಮ್ಮಪ್ಪ ಗೌಡ ಆತ್ಮಯೋಜನೆ ಅಧಿಕಾರಿ ಸಂಜನಾ, ಭೂಚೇತನ ಕಾರ್ಯಕ್ರಮದ ಸರಿತಾ, ರಾಘವೇಂದ್ರ ನಾಯಕ್ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.