ಉಡುಪಿ: `ವಿಜ್ಞಾನವು ಸಾಮಾಜಿಕ ವ್ಯವಸ್ಥೆ ಮೇಲೆ ದಟ್ಟ ಪ್ರಭಾವ ಬೀರಿದ್ದು, ಸಾಮಾಜಿಕ ಗ್ರಹಿಕೆಗಳು ಹಾಗೂ ಮೂಢನಂಬಿಕೆಗಳು ವೈಜ್ಞಾನಿಕ ಆಲೋಚನೆಗಳಿಂದ ತಿದ್ದುಪಡಿಗೊಂಡಿವೆ~ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಬಿ.ಎಸ್.ಶೇರಿಗಾರ್ ಇಲ್ಲಿ ಅಭಿಪ್ರಾಯಪಟ್ಟರು.
ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ರಾಜ್ಯ ವಿಜ್ಞಾನ ವಿದ್ಯಾ ಜಾಗೃತಿ ಸಂಸ್ಥೆ ಆಶ್ರಯದಲ್ಲಿ ನಗರದ ಎಂ.ಜಿ.ಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ `ವಿದ್ಯಾರ್ಥಿ-ವಿಜ್ಞಾನಿ ನೇರ ಸಂಪರ್ಕ~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
`ವಿಜ್ಞಾನದ ಉಗಮವೆಂದರೆ ಅದು ಕುತೂಹಲ. ಇದರಲ್ಲಿ ಅನೇಕ ಮಜಲುಗಳಿವೆ. ಪ್ರತಿಯೊಂದನ್ನೂ ಹೋಲಿಸಿ ನೋಡುವ ಪ್ರವೃತ್ತಿಯು ವಿಜ್ಞಾನದ ಹುಟ್ಟಿಗೆ ಕಾರಣವಾಯಿತು~ ಎಂದರು.
`ಕುತೂಹಲವಿಲ್ಲದೇ ವಿಜ್ಞಾನ ಬೆಳೆಯದು. ಮೂಲವಿಜ್ಞಾನ ಮತ್ತು ತಂತ್ರಜ್ಞಾನ ಒಂದಕ್ಕೊಂದು ಪೂರಕವಾಗಿ ರಬೇಕು. ಆದರೆ, ವಿಜ್ಞಾನ ಮತ್ತು ತಂತ್ರಜ್ಞಾನ ದುರುಪಯೋಗವೂ ಆಗುತ್ತಿದೆ. ತಂತ್ರಜ್ಞಾನದ ಜತೆ ಮೂಲವಿಜ್ಞಾನಕ್ಕೆ ಒತ್ತು ನೀಡಿ ವಿಜ್ಞಾನದ ದುರುಪಯೋಗ ತಡೆಯಬಹುದು~ ಎಂದರು.
ಎಂ.ಜಿ.ಎಂ.ಕಾಲೇಜಿನ ಪ್ರಾಂಶುಪಾಲ ಪ್ರೊ. ಡಾ.ಪಿ.ವೆಂಕಟರಮಣ ಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗೇಂದ್ರ ಮಧ್ಯಸ್ಥ, ಪರಮೇಶ್ವರಯ್ಯ, ಭಾರತಿಯ ವಿಜ್ಞಾನ ಸಂಸ್ಥೆಯ ಡಾ.ಹರೀಶ್ ಭಟ್, ಟಿ.ಜಿ. ಕೃಷ್ಣ ಮೂರ್ತಿ ಅರಸ್, ಯು.ಆರ್.ಮಧ್ಯಸ್ಥ ಇದ್ದರು.